ADVERTISEMENT

ಹೊಳೆನರಸೀಪುರ| ಅತ್ಯಾಚಾರ ಪ್ರಕರಣ ದಾಖಲಿಸಲು ಮಹಿಳೆ ಮೇಲೆ ಒತ್ತಡ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:32 IST
Last Updated 20 ಫೆಬ್ರುವರಿ 2026, 6:32 IST
<div class="paragraphs"><p>ಬಂಧನ</p></div>

ಬಂಧನ

   

ಹೊಳೆನರಸೀಪುರ: ಅತ್ತೆ ಮನೆಯಲ್ಲಿ ನನಗೆ ಕರುಕುಳ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡು ಸಹಾಯ ಕೇಳಿದ್ದ ಬಡ ಮಹಿಳೆಯೊಬ್ಬರಿಂದ, ಮತ್ತೊಬ್ಬ ವ್ಯಕ್ತಿಯ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಲು ಯೋಜಿಸಿದ್ದ ಇಲ್ಲಿನ ಕಾನೂನು ಕಾಲೇಜೊಂದರ ಅತಿಥಿ ಉಪನ್ಯಾಸಕಿ ನಾಗಲಕ್ಷ್ಮಿ ಹಾಗೂ ಸಹಕಾರ ನೀಡಿದ ಲ್ಯಾಬ್ ಟೆಕ್ನಿಷಿಯನ್‌ ಧರ್ಮರಾಜ ಎಂಬುವವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನನ್ನ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ನನಗೆ ನ್ಯಾಯ ಒದಗಿಸಿ’ ಎಂದು ನಾಗಲಕ್ಷ್ಮಿ ಬಳಿಗೆ ಅಸಹಾಯಕ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದರು. ಈಕೆಯ ಗಂಡನ ಮನೆಯವರಿಗೆ ತಿಳಿಹೇಳಿದ ನಾಗಲಕ್ಷ್ಮಿ, ಆಕೆಯನ್ನು ಗಂಡನ ಮನೆಗೆ ಕಳುಹಿಸಿದ್ದರು.

ADVERTISEMENT

ಈ ಮಹಿಳೆಯ ಪತಿ, ತನ್ನ ಪತ್ನಿ ಮೇಲೆ ಅನುಮಾನಪಡುತ್ತಿದ್ದು, ‘ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರಾದರೂ ಗಂಡಸರು ಬಂದು ಹೋದರೆ ತಿಳಿಸುವಂತೆ’ ಅಕ್ಕಪಕ್ಕದವರಿಗೆ ಹೇಳಿದ್ದ. ಪರಿಚಯಸ್ಥರು ಮನೆಗೆ ಬಂದು ಹೋಗಿದ್ದನ್ನು, ನೆರೆಮನೆಯ ಯುವತಿ ಪೋಟೊ ತೆಗೆದು ತೋರಿಸಿದ್ದಳು.ಈ ಫೋಟೋವನ್ನು ನಾಗಲಕ್ಷ್ಮಿಗೆ ತೋರಿಸಿದ ಅಸಹಾಯಕ ಮಹಿಳೆಯ ಪತಿ, ‘ಈತ ನಾನು ಇಲ್ಲದ ವೇಳೆ ನಮ್ಮ ಮನೆಗೆ ಬಂದು ಹೋಗಿದ್ದಾನೆ’ ಎಂದು ತಿಳಿಸಿದ್ದ. ಆತನ ಪೋಟೊ ಪಡೆದುಕೊಂಡ ನಾಗಲಕ್ಷ್ಮಿ, ಆತನಿಂದ ಹಣ ವಸೂಲಿಗೆ ಯೋಜನೆ ರೂಪಿಸಿದ್ದಳು. ಅದರಂತೆ ಅಸಹಾಯಕ ಮಹಿಳೆಯನ್ನು ಸಂಪರ್ಕಿಸಿದ ನಾಗಲಕ್ಷ್ಮಿ, ‘ನಿನ್ನ ಗಂಡ ಇಲ್ಲದ ಸಮಯದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸು’ ಎಂದು ಹೇಳಿದ್ದಳು. ಮಹಿಳೆ ಒಪ್ಪದಿದ್ದಾಗ, ಖಾಸಗಿ ಪ್ರಯೋಗಾಲಯ ತಜ್ಞ ಧರ್ಮರಾಜು ಎಂಬಾತನನ್ನು ಕರೆಯಿಸಿ, ಮಹಿಳೆಯನ್ನು ಬಲವಂತವಾಗಿ ಪರೀಕ್ಷೆಗೆ ಒಳಪಡಿಸಿದ್ದರು. ನಂತರ ‘ನಿನ್ನ ಮೇಲೆ ಅತ್ಯಚಾರ ನಡೆದಿದೆ.  ವ್ಯಕ್ತಿಯ ವಿರುದ್ಧ ದೂರು ದಾಖಲಿಸದಿದ್ದರೆ, ನೀನೇ ಆ ವ್ಯಕ್ತಿಗೆ ಸಹಕಾರ ನೀಡಿದ್ದಿ  ನಿನ್ನ ಗಂಡನಿಗೆ ಹೇಳುತ್ತೇನೆ’ ಎಂದು ಹೆದರಿಸಿ, ದೂರು ದಾಖಲಿಸಲು ನಗರ ಠಾಣೆಗೆ ಕರೆದುಕೊಂಡು ಬಂದಿದ್ದರು.

ಠಾಣೆಗೆ ಬಂದ ಮಹಿಳೆ, ಅತ್ಯಾಚಾರ ಪ್ರಕರಣ ದಾಖಲಿಸದೆ ಸುಮ್ಮನೆ ಅಳುತ್ತಿದ್ದನ್ನು ಕಂಡ ಪೊಲೀಸರು ಸಾಂತ್ವನ ಹೇಳಿ ಸಮಾಧಾನವಾಗಿ ಕೇಳಿದ್ದಾರೆ. ಮಹಿಳಾ ಪೊಲೀಸರಿಗೆ ನಡೆದ ಘಟನೆಯಲ್ಲಾ ವಿವರಿಸಿದ ಮಹಿಳೆ, ‘ನನ್ನ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ನಾಗಲಕ್ಷ್ಮಿ ಹೆದರಿಸಿ ಅತ್ಯಾಚಾರ ಪ್ರಕರಣ ದಾಖಲಿಸಲು ನನ್ನನ್ನು ಕಳುಹಿಸಿದ್ದಾರೆ. ಆ ವ್ಯಕ್ತಿಯಿಂದ ಹಣ ವಸೂಲಿ ಮಾಡಲು ಈ ರೀತಿ ಮಾಡುವಂತೆ ನನಗೆ ಬಲವಂತ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾಳೆ. ಕೂಡಲೇ ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ನಾಗಲಕ್ಷ್ಮಿ ಹಾಗೂ ಪ್ರಯೋಗಾಲಯ ತಜ್ಞನನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.