
ಹಾಸನ: ವಸತಿ ಯೋಜನೆಯಡಿ ಅನರ್ಹರ ಖಾತೆಗೆ ಹಣ ಹಾಕಿದ್ದ ಪ್ರಕರಣದ ಬೆನ್ನತ್ತಿರುವ ಸರ್ಕಾರ, ಇದೀಗ ನೈಜ ಫಲಾನುಭವಿಗಳ ಖಾತೆಗೆ ಅನುದಾನ ಒದಗಿಸಲು ಮುಂದಾಗಿದೆ.
ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ನಡೆದಿರುವ ಅನುದಾನ ದುರ್ಬಳಕೆಗೆ ಸಂಬಂಧಿಸಿ ಸೆ.20ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ವಿಧಾನ ಪರಿಷತ್ನಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮಧು ಜಿ. ಮಾದೇಗೌಡರಿಗೆ ಉತ್ತರ ನೀಡಿರುವ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಇದನ್ನು ಸ್ಪಷ್ಟಪಡಿಸಿದ್ದಾರೆ.
‘ಸಾಫ್ಟ್ವೇರ್ನಲ್ಲಿ ತಪ್ಪಾಗಿ ನಮೂದಿಸಿರುವ ಆಧಾರ್ ಮಾಹಿತಿಯನ್ನು ಡಿಲೀಟ್ ಮಾಡಲಾಗುವುದು. ನಂತರ ನೈಜ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಿಂದ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಹಾಸನ, ಕೋಲಾರದಲ್ಲಿ ಅವ್ಯವಹಾರ: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿ, ಫಲಾನುಭವಿಗಳಲ್ಲದವರ ಆಧಾರ್ ಸಂಖ್ಯೆಯನ್ನು ಸಾಫ್ಟ್ವೇರ್ಗೆ ನಮೂದಿಸಿ ಹಾಸನ ಹಾಗೂ ಕೋಲಾರ ಜಿಲ್ಲೆಯಲ್ಲಿ ₹3.08 ಕೋಟಿಯನ್ನು ಅನರ್ಹರ ಖಾತೆಗೆ ಜಮೆ ಮಾಡಲಾಗಿದೆ.
ಹಾಸನದ ಆಲೂರು, ಸಕಲೇಶಪುರ, ಹಾಸನ, ಅರಸೀಕೆರೆ ತಾಲ್ಲೂಕುಗಳಿಗೆ ಸಂಬಂಧಿಸಿ ₹2.92 ಕೋಟಿ ಅವ್ಯವಹಾರವಾಗಿದ್ದು, ಕೋಲಾರ ತಾಲ್ಲೂಕಿನಲ್ಲಿ ₹15.30 ಲಕ್ಷ ಅನುದಾನ ದುರ್ಬಳಕೆಯಾಗಿದೆ.
‘ಹೊರಗುತ್ತಿಗೆ’ಯವರಿಂದ ಅವ್ಯವಹಾರ: ಯೋಜನೆಯ ತಾಲ್ಲೂಕು ನೋಡಲ್ ಅಧಿಕಾರಿಗಳಾಗಿದ್ದ ಹೊರಗುತ್ತಿಗೆ ಆಧಾರದ ನೌಕರರೇ ಅವ್ಯವಹಾರಕ್ಕೆ ಕಾರಣ. ಈ ಕುರಿತು ಕೋಲಾರ ಹಾಗೂ ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಲ್ಲಿಸಿದ್ದ ವರದಿ ಆಧರಿಸಿ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಸಕಲೇಶಪುರ ತಾಲ್ಲೂಕು ನೋಡಲ್ ಅಧಿಕಾರಿಯಾಗಿದ್ದು, ಜಿಲ್ಲಾ ನೋಡಲ್ ಅಧಿಕಾರಿಯ ಹೆಚ್ಚುವರಿ ಪ್ರಭಾರ ನಿರ್ವಹಿಸುತ್ತಿದ್ದ ರಾಜೇಶ್ ಎಂ.ಕೆ., ತಾಲ್ಲೂಕು ನೋಡಲ್ ಅಧಿಕಾರಿಗಳಾಗಿದ್ದ ಅರಸೀಕೆರೆಯ ಪಾಲಾಕ್ಷ, ಆಲೂರಿನ ಚಿದಾನಂದ ಎಂ., ಹಾಸನದ ಗುರುಮೂರ್ತಿ ಎಂ.ಆರ್. ಆರ್., ಕೋಲಾರದ ಮಂಜುನಾಥ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಅರಸೀಕೆರೆ ತಾಲ್ಲೂಕು ಬಾಣಾವರ ಗ್ರಾಮ ಪಂಚಾಯಿತಿ ಪಿಡಿಒ ಕುಮಾರಸ್ವಾಮಿ, ಹಾಸನ ತಾಲ್ಲೂಕು ಅಂಕಪುರ ಪಿಡಿಒ ಬ್ಯಾಟರಾಯನಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.