ಅರಕಲಗೂಡು: ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಬದುಕು ಉಜ್ವಲಗೊಳ್ಳುತ್ತದೆ. ಮೌಲ್ಯಾಧಾರಿತ ಸದ್ಗುಣವಂತನ ಬದುಕು ಇತರರಿಗೆ ದಾರಿದೀಪವಾಗುತ್ತದೆ. ಸದ್ಗುಣ ಮತ್ತು ಸಚ್ಚಾರಿತ್ರ್ಯದಿಂದ ಮನುಷ್ಯನ ಬದುಕು ಶ್ರೀಮಂತಗೊಳ್ಳಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಮಠ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮುಸವತ್ತೂರು ಗ್ರಾಮದ ನೂತನ ವೀರಭದ್ರೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಶಂಕರಲಿಂಗೇಶ್ವರ ಜಂಪೋತ್ಸವದ ಅಂಗವಾಗಿ ಶನಿವಾರ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಮಣ್ಣು, ನೀರು, ಬೆಂಕಿ ಗಾಳಿ ಮತ್ತು ಕಲ್ಲಿನಲ್ಲಿಯೂ ದೇವರನ್ನು ಕಂಡು ಪೂಜಿಸಿದವರು ಭಾರತೀಯರು. ಚಿನ್ನವಿಲ್ಲದೇ ಮನುಷ್ಯ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂದರು.
ದೇಹ, ಮನ, ಬುದ್ದಿ, ಕೈಕಾಲುಗಳೆಲ್ಲವೂ ನಿಜವಾದ ಸಂಪತ್ತು. ಹಣ, ಚಿನ್ನ, ಬೆಳ್ಳಿ, ವಸ್ತು ವಡವೆಗಳಿಂಗ ಬದುಕು ಕಟ್ಟಿಕೊಳ್ಳುವುದು ಒಳಿತಲ್ಲ. ಮೌಲ್ಯಾಧಾರಿತ ಧರ್ಮದ ಪರಿಪಾಲನೆ ಮಾಡಿ ಮುನ್ನಡೆದರೆ ಬದುಕು ಆದರ್ಶಗೊಳ್ಳುತ್ತದೆ ಎಂದರು.
ಮನಸ್ಸಿನ ಹೊಯ್ದಾಟವನ್ನು ಶಾಂತ ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವೆಂದು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಸ್ಪಷ್ಟಪಡಿಸಿದ್ದಾರೆ. ಆಚಾರ್ಯರು, ಋಷಿಮುನಿಗಳು, ಸಂತ ಮಹಾಂತರು, ಭೌತಿಕ ಬದುಕಿಗೆ ಸೋಲದೇ ಆಧ್ಯಾತ್ಮ ಮಾರ್ಗದಲ್ಲಿ ಆನಂದದಿಂದ ಬಾಳಿ ಇನ್ನಿತರರ ಬಾಳಿಗೆ ದಾರಿದೀಪವಾದರು ಎಂದು ತಿಳಿಸಿದರು.
ಮುಸವತ್ತೂರು ಗ್ರಾಮದ ಸಕಲ ಸದ್ಭಕ್ತರ ಸಹಕಾರದಿಂದ ನೂತನ ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿರುವುದು ತಮ್ಮೆಲ್ಲರಲ್ಲಿರುವ ಧರ್ಮಶ್ರದ್ಧೆ, ದೇವರಲ್ಲಿಟ್ಟ ನಂಬಿಕೆಗೆ ಸಾಕ್ಷಿಯಾಗಿದ್ದು, ಹರುಷ ಉಂಟಾಗಿದೆ ಎಂದರು.
ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧೇಶ ನಾಗೇಂದ್ರ, ವಿದ್ಯಾ, ಬುದ್ಧಿ, ಹೃದಯ, ಹೊಟ್ಟೆ, ನೆಲ ಜಲ, ಅನ್ನ ಗಾಳಿ ಬೆಳಕು ಕೊಟ್ಟವನು ಭಗವಂತ. ಬದುಕಿನ ಬೆಂಗಾಡು ಸಮೃದ್ಧಗೊಳ್ಳಲು ದೇವರ ಕಾರುಣ್ಯದ ಕಿರಣ ಬೇಕು. ಸಂಸ್ಕಾರ, ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸತ್ಫಲಗಳನ್ನು ಪಡೆಯಬೇಕು. ರಂಭಾಪುರಿ ಜಗದ್ಗುರುಗಳು ಸಣ್ಣ ಹಳ್ಳಿಗೆ ದಯಮಾಡಿಸಿರುವುದು ತಮ್ಮೆಲ್ಲರ ಪೂರ್ವಾರ್ಜಿತ ಪುಣ್ಯದ ಫಲವಾಗಿದೆ ಎಂದು ಹೇಳಿದರು.
ದೊಡ್ಡಬೆಮ್ಮತ್ತಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಸುರೇಶ ನೇತೃತ್ವ ವಹಿಸಿದ್ದರು. ಹಾರಿಕಾ ಮಂಜುನಾಥ ಭಾರತೀಯ ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ವೀರಶೈವ ಮಹಾಸಭೆ ನಿರ್ದೇಶಕ ಯೋಗೇಶ್ ರಂಗಾಪುರ, ಶ್ರೀಕಂಠಪ್ಪ, ಬಸವರಾಜು, ಮಲ್ಲೇಶಣ್ಣ ಕತ್ತಿಮಲ್ಲೇನಹಳ್ಳಿ, ಜಗದೀಶ ದಡದಹಳ್ಳಿ, ಬಸವರಾಜು ಪಾಲ್ಗೊಂಡು, ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಹೆಗ್ಗಡಹಳ್ಳಿಮಠದ ಷಡ್ಭಾವರಹಿತೇಶ್ವರ ಶ್ರೀಗಳು, ಕೆಸವತ್ತೂರು ಬಸವರಾಜೇಂದ್ರ ಸ್ವಾಮೀಜಿ, ಶಿರದನಹಳ್ಳಿ ಸದಾಶಿವ ಸ್ವಾಮೀಜಿ ಉಪಸ್ಥಿತರಿದ್ದರು. ರಶ್ಮಿ ಪರಮೇಶ ನಿರೂಪಿಸಿದರು.
ಮಾನವ ಜೀವನ ಅಮೂಲ್ಯ. ದೇವರು ಕೊಟ್ಟ ಕೊಡುಗೆಗೆ ಸರಿಸಾಟಿಯಾದುದು ಇನ್ನೊಂದಿಲ್ಲ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬಾಳು ಬಂಧನಕಾರಿಯಾಗುತ್ತದೆ ಎಂದು ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಸಮ್ಮುಖ ವಹಿಸಿ ಮಾತನಾಡಿದ ಅವರು ಮನುಷ್ಯ ಜೀವನದಲ್ಲಿ ಆಸ್ತಿ ಅಂತಸ್ತು ಅಧಿಕಾರ ಮುಖ್ಯವಲ್ಲ. ಶಾಂತಿ ಜ್ಞಾನದ ಸಂಪತ್ತು ಮುಖ್ಯ. ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ವಿಚಾರಧಾರೆಗಳು ನಮ್ಮೆಲ್ಲರ ಬಾಳಿಗೆ ಆಶಾಕಿರಣ. ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ಮುಸವತ್ತೂರಿನಲ್ಲಿ ನೆಲೆಗೊಂಡಿರುವುದು ತಮ್ಮೆಲ್ಲರ ಸೌಭಾಗ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.