ADVERTISEMENT

ನಿರಾಶ್ರಿತರಿಗೆ ದೊರಕದ ಪುನರ್ವಸತಿ

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ದ್ವಾರಸಮುದ್ರ ಕೋಡಿಹಳ್ಳ: ನಿವಾಸಿಗಳಿಗೆ ನಿತ್ಯ ಆತಂಕ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:07 IST
Last Updated 1 ನವೆಂಬರ್ 2025, 4:07 IST
ದ್ವಾರಸಮುದ್ರ ಕೆರೆ ಕೋಡಿಹಳ್ಳದ ಪಕ್ಕದಲ್ಲಿ ಅಪಾಯದ ಅಂಚಿನಲ್ಲಿರುವ ಬೂದಿಗುಂಡಿ ಬಡಾವಣೆ
ದ್ವಾರಸಮುದ್ರ ಕೆರೆ ಕೋಡಿಹಳ್ಳದ ಪಕ್ಕದಲ್ಲಿ ಅಪಾಯದ ಅಂಚಿನಲ್ಲಿರುವ ಬೂದಿಗುಂಡಿ ಬಡಾವಣೆ   

ಹಳೇಬೀಡು: ದ್ವಾರಸಮುದ್ರ ಕೆರೆಯ ಕೋಡಿಹಳ್ಳದ ಪಕ್ಕದಲ್ಲಿ ಅಪಾಯದ ಅಂಚಿನಲ್ಲಿರುವ ಬೂದಿಗುಂಡಿ ನಿವಾಸಿಗಳಿಗೆ, ಒಂಟೆಮಳ್ಳಿ ಗುಡ್ಡದಲ್ಲಿ ಪುನರ್ವಸತಿ ಕಲ್ಪಿಸುವ ಯೋಜನೆ ವಿಳಂಬವಾಗಿದೆ. ಕಳೆದ ವಾರ ನಿರಂತವಾಗಿ ಮಳೆ ಸುರಿದಿದ್ದರಿಂದ ಹಳ್ಳದಲ್ಲಿ ರಭಸದ ನೀರು ಹರಿಯುತ್ತಿದ್ದು, ನಿವಾಸಿಗಳು ಜೀವ ಬೀಗಿ ಹಿಡಿದು ವಾಸ ಮಾಡುವಂತಾಗಿದೆ.

16 ವರ್ಷಗಳ ಹಿಂದೆ ದ್ವಾರಸಮುದ್ರ ಕೆರೆಯ ಕೋಡಿಹಳ್ಳದಲ್ಲಿ ಪ್ರವಾಹದಂತೆ ನೀರು ನುಗ್ಗಿದ್ದರಿಂದ ಮೂರು ಮನೆಗಳು ಕೊಚ್ಚಿ ಹೋಗಿದ್ದವು. ಬೂದಿಗುಂಡಿ ನಿವಾಸಿಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆ, ವೇಗವಾಗಿ ಹರಿದ ನೀರಿನಂತೆ ಕೊಚ್ಚಿ ಹೋಗಿದ್ದವು. ಪ್ರವಾಹ ತಗ್ಗಿದ ನಂತರವೂ ಜನರು ಅದೇ ಅಪಾಯದ ಮನೆಗಳಿಗೆ ಬಂದು ನೆಲೆಸಿದ್ದಾರೆ. ಇಲ್ಲಿನವರಿಗೆ ಅಪಾಯದ ಸ್ಥಳದಿಂದ ಮುಕ್ತಿ ಇಲ್ಲದಂತಾಗಿದೆ ಎನ್ನುತ್ತಾರೆ ನಿವಾಸಿಗಳು.

‘3 ವರ್ಷಗಳ ಹಿಂದೆ ಪುನರ್ವಸತಿ ಕಲ್ಪಿಸುವ ಮಾತು ಮುನ್ನೆಲೆಗೆ ಬಂದಿತ್ತು. ಜಿಲ್ಲಾಡಳಿತ ಒಂಟೆಮಳ್ಳಿ ಗುಡ್ಡದ ತಪ್ಪಲಿನಲ್ಲಿ 6 ಎಕರೆ ಜಾಗವನ್ನು ಕಾಯ್ದಿರಿಸಲು ಅಂದಿನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ನೀಡಿದ್ದರು. ಗ್ರಾಮ ಪಂಚಾಯಿತಿಗೆ ಆದೇಶ ಬಂದ ವಿಚಾರ ಕೇಳಿ ಬೂದಿಗುಂಡಿ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದರು. ಕಂದಾಯ ಇಲಾಖೆಯಿಂದ ಮುಂದಿನ ಪ್ರಕ್ರಿಯೆ ನಡೆಯದೇ ಇರುವುದರಿಂದ ಗಟ್ಟಿನೆಲೆಯಲ್ಲಿ ಸ್ವಂತಸೂರಿನ ಕನಸು ನುಚ್ಚು ನೂರಾಯಿತು’ ಎಂದು ಬೂದಿಗುಂಡಿ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬಿಡುವಿಲ್ಲದಂತೆ ಸುರಿದ ಮಳೆಗೆ ಕಳೆದ ವಾರ ಬೂದಿಗುಂಡಿಯಲ್ಲಿ ಎರಡು ಮನೆಗಳು ಕುಸಿದು ಬಿದ್ದಿವೆ. ದ್ವಾರಸಮುದ್ರ ಕೆರೆಕೋಡಿಯಲ್ಲಿ ಹರಿಯುತ್ತಿರುವ ಎತ್ತಿನಹೊಳೆ ನೀರಿನೊಂದಿಗೆ, ಮಳೆ ನೀರು ಸೇರಿಕೊಂಡು ರಭಸವಾಗಿ ಕೋಡಿಯಲ್ಲಿ ನೀರು ಹರಿಯಿತು. ಬೂದಿಗುಂಡಿಯ ಹಳ್ಳದ ಪಕ್ಕದ ಮನೆಗಳಿಗೆ ತಾಗಿಕೊಂಡು ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಮನೆಗಳು ಕೊಚ್ಚಿಕೊಂಡು ಹೋಗುತ್ತವೆಯೇ ಎಂಬ ಭಯದಲ್ಲಿಯೇ ರಾತ್ರಿ ನಿದ್ದೆ ಇಲ್ಲದೆ ಕಳೆದೆವು’ ಎಂದು ಫಯಾಜ್ ಎಚ್.ಕೆ.ಹೇಳಿದರು.

‘ಕಳೆದ ವಾರದಂತೆ ಮಳೆ ಸುರಿದರೆ 18 ವರ್ಷಗಳ ಹಿಂದೆ ನಡದಿದ್ದ ಪ್ರವಾಹದ ಘಟನೆ ಮರುಕಳಿಸುವ ಸಾಧ್ಯತೆ ಇದ್ದು, ಪುನಃ ಕಾಳಜಿ ಕೇಂದ್ರ ಆರಂಭಿಸುವ ಪರಿಸ್ಥಿತಿ ಬರುತ್ತದೆ. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವುದು ಬೇರೆ ವಿಚಾರ. ಸಾವು ನೋವು ಸಂಭವಿಸಿದರೆ ಅನುಭವಿಸುವುದು ಕಷ್ಟವಾಗುತ್ತದೆ. ಬೂದಿಗುಂಡಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹಳ್ಳದ ಪಕ್ಕದಲ್ಲಿಯೇ ಮಕ್ಕಳು ಆಟವಾಡುತ್ತಾ ಬೆಳೆಯುತ್ತಿದ್ದಾರೆ. ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ’ ಎಂದು ಕುಮಾರ್ ಹೇಳಿದರು.

‘ಮಾಜಿ ಸೈನಿಕರು, ಮುಳುಗಡೆ ಸಂತ್ರಸ್ತರು ಹಾಗೂ ಸಂಘ–ಸಂಸ್ಥೆಗಳಿಗೆ ಜಾಗ ಕಾಯ್ದಿರಿಸಿಲ್ಲ. ಜಾಗದಲ್ಲಿ ಅರಣ್ಯ ಬೆಳೆಸುವ ಯೋಜನೆ, ಗಣಿಗಾರಿಕೆ ನಡೆಸುವ ನಡೆಸಲು ಕಾರ್ಯಗತವಾಗಿಲ್ಲ. ಜಾಗದ ಕುರಿತು ಕೋರ್ಟ್ ವ್ಯಾಜ್ಯ ಇಲ್ಲ. ಸಾರ್ವಜನಿಕರಿಂದ ತಕರಾರು ಅರ್ಜಿ ಸಹ ಬಂದಿಲ್ಲ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಕಚೇರಿಯಿಂದ ವರದಿ ಸಲ್ಲಿಸಲಾಗಿತ್ತು ಎಂಬ ವರದಿ ಓದಿದ್ದೆವು. ಮುಂದಿನ ಪ್ರಕ್ರಿಯೆ ಏನಾಯಿತು ಎಂಬುದು ತಿಳಿಯಲಿಲ್ಲ’ ಎಂದು ಫಯಾಜ್‌ ಎಚ್.ಕೆ ಹೇಳಿದರು.

‘ಬೂದಿಗುಂಡಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿ ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಪಿಡಿಒ ವಿರೂಪಾಕ್ಷ ತಿಳಿಸಿದ್ದಾರೆ.

ಸ್ಥಗಿತವಾದ ಯೋಜನೆ

‘ನಿರಾಶ್ರಿತರ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಒಂಟೆಮಳ್ಳಿ ಗುಡ್ಡದ ಬಳಿ ಸರ್ವೆ ನಂಬರ್ 263 ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಿಕೆಗಾಗಿ ಗ್ರಾಮ ಪಂಚಾಯಿತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೂರು ವರ್ಷದ ಹಿಂದೆ ಪತ್ರ ಬರೆಯಲಾಗಿತ್ತು’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ‘ಗ್ರಾಮ ಪಂಚಾಯಿತಿಯವರು ಹಾಗೂ ಅಂದಿನ ಶಾಸಕ ಕೆ.ಎಸ್.ಲಿಂಗೇಶ್ ಹಳೆಯ ಕಡತದ ಬೆನ್ನು ಹತ್ತಿದ್ದರಿಂದ ಹಳೇಬೀಡು ನಿವೇಶನ ರಹಿತರಿಗೆ ಸೂರು ಕಲ್ಪಿಸುವ ಅವಕಾಶ ದೊರಕಿತ್ತು. ಪ್ರಗತಿಯಲ್ಲಿದ್ದ ಸರ್ಕಾರಿ ಜಮೀನನ್ನು ನಿವೇಶನವಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಇದ್ದಕ್ಕಿದ್ದಂತೆ ಸ್ಥಗಿತವಾಗಿದೆ’ ಎಂದು ಬೂದಿಗುಂಡಿ ನಿವಾಸಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.