
ಹಾಸನ: ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆಯಾಗಿದ್ದು, ಭತ್ತ, ಕಾಫಿ ಕೊಯ್ಲಿಗೆ ಆತಂಕ ಎದುರಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಸಂಜೆ 5.30ಕ್ಕೆ ಆರಂಭವಾದ ಜಿಟಿಜಿಟಿ ಮಳೆ 45ನಿಮಿಷಕ್ಕೂ ಹೆಚ್ಚು ಹೊತ್ತು ಸುರಿಯಿತು. ಮಲೆನಾಡು ಭಾಗವಾದ ಬೇಲೂರು, ಸಕಲೇಶಪುರ, ಹೆತ್ತೂರು, ಆಲೂರಿನಲ್ಲೂ ಮಳೆಯಾಯಿತು.
‘ಭತ್ತದ ಜೊತೆಗೆ ಕಾಫಿ ಕೊಯ್ಲು ಕೂಡಾ ನಡೆದಿದ್ದು, ಮಳೆಯಿಂದ ತೊಂದರೆಯಾಗುತ್ತಿದೆ. ಕಾಫಿ ಬೀಜಗಳನ್ನು ಕೊಯ್ಲು ಮಾಡಿ, ಒಣಗಿಸುವುದೂ ದುಸ್ತರವಾಗಿದೆ. ಕಾಫಿ ಹಣ್ಣುಗಳು ಉದುರುತ್ತಿವೆ. ಕಾಡಾನೆ ದಾಳಿಯ ಸಂಕಷ್ಟದ ಜೊತೆ ಹೆಚ್ಚಿ ತೊಂದರೆ ಸೇರಿಕೊಂಡಿದೆ’ ಎಂಬುದು ಬೆಳೆಗಾರರ ಅಳಲು.
‘ಸಂಕ್ರಾಂತಿ ಬರುತ್ತಿದ್ದರೂ ಮಳೆ ನಿಲ್ಲುತ್ತಿಲ್ಲ. ಕೊಯ್ಲು ಮಾಡಿರುವ ಭತ್ತವೆಲ್ಲ ತೋಯ್ದಿರುವುದರಿಂದ ಕಾಳು ಬಿಡಿಸಲು ಸಮಸ್ಯೆಯಾಗುತ್ತಿದೆ. ಬಿತ್ತನೆಯಿಂದ ಕಟಾವಿನವರೆಗೂ ಮಳೆ ಕಾಡುತ್ತಿದೆ’ ಎಂದು ಹೆತ್ತೂರಿನ ರೈತರ ರಾಮಕೃಷ್ಣ ಹಾಗೂ ಆಲೂರು ತಾಲ್ಲೂಕಿನ ಕೆ.ಹೊಸಕೋಟೆಯ ದರ್ಶನ್ ಹೇಳಿದರು.
ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯಿತು.
ತರೀಕೆರೆ ಸುತ್ತಮುತ್ತ ಹಾಗೂ ಕಳಸ ತಾಲ್ಲೂಕಿನಲ್ಲಿಯೂ ಮಳೆ ಸುರಿಯಿತು.
ಅಡಿಕೆ, ಕಾಫಿ, ಭತ್ತದ ಕೊಯ್ಲು ಆರಂಭಗೊಂಡಿದ್ದು ರೈತರು ಬಹುತೇಕ ಬೆಳೆಗಳನ್ನು ಒಣಗಲು ಅಂಗಳದಲ್ಲಿ ಹಾಕಿದ್ದರು. ದಿಢೀರ್ ಮಳೆಯಿಂದಾಗಿ ಫಸಲು ರಕ್ಷಿಸಲು ಪರದಾಡಿದರು.
ಮಡಿಕೇರಿ: ದಕ್ಷಿಣ ಕೊಡಗಿನ ಕೆಲವೆಡೆ ಮಂಗಳವಾರ ರಾತ್ರಿ ವರ್ಷದ ಮೊದಲ ಮಳೆ ಸುರಿದಿದೆ. ಹುದಿಕೇರಿ, ಚೆಯ್ಯಂಡಾಣೆ, ಕುಟ್ಟ ಸೇರಿದಂತೆ ಹಲವೆಡೆ ಹಗುರ ಮಳೆಯಾಗಿದೆ.
ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಒಣಗಲು ಹಾಕಿದ್ದ ಕಾಫಿ ತೋಯ್ದು ಹೋಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ವಾತಾವರಣ ಕಂಡು ಬಂದು, ಬೆಳೆಗಾರರನ್ನು ಆತಂಕಕ್ಕೆ ದೂಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.