ADVERTISEMENT

ಎತ್ತಿನಹೊಳೆ ಯೋಜನೆ: ನೋಡಲ್ ಅಧಿಕಾರಿ ನೇಮಿಸಲು ಕುಮಾರಸ್ವಾಮಿ ಆಗ್ರಹ

ಎಷ್ಟು ದಿನ ಕೊಳಚೆ ನೀರು ಕುಡಿಸುತ್ತೀರಾ? 

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 8:01 IST
Last Updated 9 ಅಕ್ಟೋಬರ್ 2021, 8:01 IST
   

ಸಕಲೇಶಪುರ: ಬಯಲು ಸೀಮೆ ಜಿಲ್ಲೆಗಳಿಗೆ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲ.ಆದರೆ, ಯೋಜನೆ ಆರಂಭವಾಗಿ ಹಲವು ವರ್ಷಗಳು ಕಳೆದಿದೆ. ಎಷ್ಟು ದಿನ ಜನರಿಗೆ ಕೊಳಚೆ ನೀರು ಕುಡಿಸುತ್ತೀರಾ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರವನ್ನು ಪ್ರಶ್ನಿಸಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ₹8ಸಾವಿರ ಕೋಟಿ ಯೋಜನೆ ₹23ಸಾವಿರ ಕೋಟಿ ತಲುಪಿದೆ. ಮೊದಲ ಕಾಮಗಾರಿ‌ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರು ಮೇಲೆತ್ತುವ ಕಾರ್ಯ ಆಗಬೇಕು. ಯಾವುದೇ ಯೋಜನೆಗೆ ಡಿಪಿಆರ್ ತಯಾರಿಸಬೇಕು. ಆದರೆ ಈ ಯೋಜನೆಯಲ್ಲಿ ಕೇವಲ ಲೈನ್ ಎಸ್ಟಿಮೆಟ್ ಆಗುತ್ತಿದೆ. ಇದರಿಂದಾಗಿ ಹಣ ಹೆಚ್ಚಾಗುತ್ತಿದೆ . ಯೋಜನೆಗೆ ವೇಗ ನೀಡಲು ನೋಡಲ್ ಅಧಿಕಾರಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಹಣ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು,ಯೋಜನೆ ಮೊದಲ ಹಂತದಲ್ಲಿ ಬಾಕಿ ಇರುವ ಒಂಬತ್ತು ಕಿ.ಮೀ. ಭೂಸ್ವಾಧೀನ ವಿವಾದ ಬಗೆಹರಿಸಬೇಕು ಎಂದರು.

ADVERTISEMENT

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಸಲು ಆರ್ ಎಸ್ ಎಸ್ ಕಾರಣ. ಅದರ ಬಗ್ಗೆ ಚರ್ಚೆಯಾಗಲಿ. ನಾನು ಯಾರನ್ನೂ ಮೆಚ್ಚಿಸಲು ಹೇಳಿಕೆ ನೀಡಿಲ್ಲ. ಇದು ಆರಂಭ ಅಷ್ಟೇ. ‌ಸತ್ಯಾಂಶ ಹೊರಬರಬೇಕು. ಆರ್ ಎಸ್‌ ಎಸ್ ಪ್ರಚಾರಕರು ಹೇಳಿರುವುದನ್ನು ತಿಳಿಸಿದ್ದೇನೆ ಅಷ್ಟೇ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.