ADVERTISEMENT

ಹಳೇಬೀಡು ಬಸ್ ನಿಲ್ದಾಣ ಅವ್ಯವಸ್ಥೆ ಆಗರ: ಸುಣ್ಣ ಬಣ್ಣ ಕಾಣದ ಕಟ್ಟಡ

ನೀರು ಸೋರಿಕೆ, ವಾಲುತ್ತಿರುವ ಕಾಂಪೌಂಡ್

ಎಚ್.ಎಸ್.ಅನಿಲ್ ಕುಮಾರ್
Published 25 ಫೆಬ್ರುವರಿ 2022, 5:16 IST
Last Updated 25 ಫೆಬ್ರುವರಿ 2022, 5:16 IST
ಶಿಥಿಲಾವಸ್ಥೆಯಲ್ಲಿರುವ ಹಳೇಬೀಡಿನ ಬಸ್‌ ನಿಲ್ದಾಣದ ಕಟ್ಟಡ (ಎಡಚಿತ್ರ). ನಿರ್ವಹಣೆ ಇಲ್ಲದೆ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕ
ಶಿಥಿಲಾವಸ್ಥೆಯಲ್ಲಿರುವ ಹಳೇಬೀಡಿನ ಬಸ್‌ ನಿಲ್ದಾಣದ ಕಟ್ಟಡ (ಎಡಚಿತ್ರ). ನಿರ್ವಹಣೆ ಇಲ್ಲದೆ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕ   

ಹಳೇಬೀಡು: ಪ್ರವಾಸಿತಾಣ ಹಳೇಬೀಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೊರತೆಯಿಂದ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ.ಇದರಿಂದಾಗಿ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸಬೇಕಾಗಿದೆ.

ಇಲ್ಲಿನ ಹೊಯ್ಸಳೇಶ್ವರ ದೇವಸ್ಥಾನಕ್ಕೆ ದೇಶ ಹಾಗೂ ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ದೇವಾಲಯದ ಬಳಿ ಇರುವ ಬಸ್ ನಿಲ್ದಾಣಮಾತ್ರ ಶಿಥಿಲಗೊಂಡು ಪಾಳು ಕಟ್ಟಡದಂತೆ ಗೋಚರಿಸುತ್ತಿದೆ.

ಕೆಎಸ್ಆರ್‌ಟಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕೈಹಾಕಿಲ್ಲ. ಕಟ್ಟಡದ ಚಾವಣಿಯಲ್ಲಿ ನೀರು ಸೋರುತ್ತಿದೆ. ಗೋಡೆಯ ಗಾರೆ ಉದುರುತ್ತಿದೆ.ಕಟ್ಟಡ ಸುಣ್ಣ ಬಣ್ಣವನ್ನೂ ಕಂಡಿಲ್ಲ. ಪ್ರವಾಸಿಗರು ನಿಲ್ದಾಣದಅವ್ಯವಸ್ಥೆ ನೋಡಿ ಅಸಹ್ಯ ಪಡುವಂತಾಗಿದೆ.

ADVERTISEMENT

ಅಕ್ವಸೆಪಿ ಕಂಪನಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಹಾಳಾಗಿದೆ. ನೀರು ಪೂರೈಕೆ ಸ್ಥಗಿತಗೊಂಡ ಕಾರಣ ಯಂತ್ರೋ ಪಕರಣಗಳುತುಕ್ಕು ಹಿಡಿಯುತ್ತಿವೆ. 10 ವರ್ಷದ ನೀರಿನ ಘಟಕ ಬೀಳುವ ಸ್ಥಿತಿಯಲ್ಲಿದೆ.

‘ಕಾಂಪೌಂಡ್‌ನ ತಳಪಾಯ ಶಿಥಿಲವಾಗಿದ್ದು, ಅಲ್ಲಲ್ಲಿ ಬಿರುಕುಬಿಟ್ಟಿದೆ. ಇದರಿಂದಾಗಿ ಅದುವಾಲುತ್ತಿದ್ದು, ಅಪಾಯದ ಸ್ಥಿತಿತಲುಪಿದೆ. ಹಲವು ಪ್ರಯಾಣಿಕರು ವಾಲುತ್ತಿರುವ ಕಾಂಪೌಂಡ್ ಮೇಲೆ ಕುಳಿತುಕೊಳ್ಳುತ್ತಾರೆ. ಕಾಂಪೌಡ್ ತೆರವು ಮಾಡಿ ಹೊಸದಾಗಿ ನಿರ್ಮಾಣಮಾಡದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಹೋಟೆಲ್ ಉದ್ಯಮಿ ಶಿವನಾಗು.

‘ನಿಲ್ದಾಣದಲ್ಲಿ ಕಟ್ಟಡಕ್ಕೆ ಹೊಂದಿ ಕೊಂಡಂತೆ ಚಿಕ್ಕ ಶೌಚಾಲಯ ಇದೆ.ಜನದಟ್ಟಣೆ ಹೆಚ್ಚಾದಾಗ ಕಾಯುವ ಸ್ಥಿತಿ ಇದೆ. ನಿಲ್ದಾಣದ ಆವರಣದಲ್ಲಿನ ಗುಂಡಿಯಲ್ಲಿಯೇ ಶೌಚಾಲಯ ತ್ಯಾಜ್ಯ ತುಂಬಿಸುತ್ತಿದ್ದು, ಿದರಿಂದ ದುರ್ವಾಸನೆ ಹರಡುತ್ತದೆ. ಒಮ್ಮೊಮ್ಮೆ ಹೊಯ್ಸಳೇಶ್ವರ ದೇವಾಲದವರೆಗೂ ವಾಸನೆ ಹಬ್ಬುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯನಿಂಗಪ್ಪ ಆರೋಪಿಸಿದರು.

‘ಪ್ರತಿದಿನ ನಿಲ್ದಾಣಕ್ಕೆ 183 ಬಸ್‌ಗಳು ಬಂದು ಹೋಗುತ್ತವೆ. ದೂರದ ರಾಯಚೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು ಹೋಗುವುದಕ್ಕೂ ಬಸ್ಸೌಲಭ್ಯ ಇದೆ. ರಾತ್ರಿ ವೇಳೆ ಹಳೇಬೀಡಿನಿಂದ ಹಾಸನ, ಬೇಲೂರುಬಾಣಾವರಕ್ಕೆ ತೆರಳಲು ಬಸ್ ಇಲ್ಲದೆ, ಬೆಂಗಳೂರು, ಮಂಗಳೂರು ಶಿವಮೊಗ್ಗ ಮೊದಲಾದ ನಗರಗಳಿಗೆ ತುರ್ತು ಕೆಲಸಕ್ಕೆ ತೆರಳುವ ವವರಿಗೆ ತೊಂದರೆಯಾಗಿದೆ. ರಾತ್ರಿ ವೇಳೆ ದೂರದಊರಿಗೆ ಬಸ್ ಸಂಚಾರ ಆರಂಭಿಸಿ’ ಎಂದು ಸ್ಥಳೀಯರುಒತ್ತಾಯಿಸಿದ್ದಾರೆ.

***

ಬಸ್ ನಿಲ್ದಾಣ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಸಿವಿಲ್ ಕಾಮಗಾರಿ ವಿಭಾಗಕ್ಕೆ ತಿಳಿಸಲಾಗಿದೆ. ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಲಿದ್ದಾರೆ.
-ಭೈರೇಗೌಡ, ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕ

***

ನಿಲ್ದಾಣದ ಕಟ್ಟಡ ಗಟ್ಟಿಯಾ ಗಿದೆ. ಕ್ಯಾಂಟಿನ್ ಚಾವಣಿ ಸೋರುತ್ತಿದ್ದು, ಗೋಡೆ ಸಿಮೆಂಟ್ ಪದರು ಉದುರುತ್ತಿದೆ. ದುರಸ್ತಿ ಕೆಲಸ ಶೀಘ್ರ ಆರಂಭವಾಗಲಿದೆ.
-ರಮೇಶ್, ಎಂಜಿನಿಯರ್, ಕೆಎಸ್‌ಆರ್‌ಟಿಸಿ

***

ಹಳೇಬೀಡು ಬಸ್ ನಿಲ್ದಾಣ ಪ್ರವಾಸಿಗರಿಗೆ ಅಗತ್ಯವಿದೆ. ನಿಲ್ದಾಣ ಪಕ್ಕದ ಲೋಕೋಪಯೋಗಿ ಇಲಾಖೆ ಸ್ವಲ್ಪ ಜಾಗವನ್ನು ನಿಲ್ದಾಣಕ್ಕೆ ಹಸ್ತಾಂತರಿಸಿ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು.
-ಶಿವನಾಗು, ಹೋಟೆಲ್‌ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.