
ಹೊಳೆನರಸೀಪುರ: ತಾಲ್ಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಕದರಿ ಲಕ್ಷ್ಮೀನರಸಿಂಹಸ್ವಾಮಿ ಸಮಿತಿ ಟ್ರಸ್ಟ್ ಹಾಗೂ ಭಕ್ತರ ಸಹಕಾರದಲ್ಲಿ ನಿರ್ಮಿಸಿರುವ ಕದರಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನೆ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.
ಬ್ರಾಹ್ಮಿ ಮಹೂರ್ತದಲ್ಲಿ ತುಮಕೂರು ಜಿಲ್ಲೆ ಶೆಟ್ಟಿಗೊಂಡನಹಳ್ಳಿಯ ದುಮ್ಮಿಶಾಲ ಹಳ್ಳಿಕಾರ ಮಠದ ಬಾಲಕೃಷ್ಣಾನಂದ ಸ್ವಾಮೀಜಿ ಹಾಗೂ ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಬಿಂಬಪ್ರತಿಷ್ಠೆ, ಕಲಶಾಭಿಷೇಕ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ರಂಭಾಛೇದನ, ಕೂಷ್ಮಾಂಡಛೇದನ, ಪೂರ್ಣಾಹುತಿ, ಪ್ರಾಣಪ್ರತಿಷ್ಠೆ, ನೇತ್ರೋನ್ನಿಲನ, ಮಹಾನಿವೇದನೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಪಟ್ಟಣದ ರಾಘವೇಂದ್ರ ಮಠದ ವ್ಯವಸ್ಥಾಪಕ ಶ್ರೀಷಾಚಾರ್ ನೇತೃತ್ವದಲ್ಲಿ ಶೃಂಗೇರಿಯಿಂದ ಬಂದಿದ್ದ ಅರ್ಚಕರು ಹಾಗೂ ದೇವಾಲಯದ ಹಿರಿಯ ಅರ್ಚಕರಾದ ಟಿ.ಟಿ.ನಾಗರಾಜು ಹಾಗೂ ಟಿ.ಪಿ.ವಿಜಯಕುಮಾರ್ ಪೂಜೆ ನೆರವೇರಿಸಿದರು.
ಸಂಸದ ಶ್ರೇಯಸ್ ಎಂ.ಪಟೇಲ್, ದಾರ್ಮಿಕ ದತ್ತಿ ಇಲಾಖೆಯ ಸದಸ್ಯ ಕೆ.ಎಂ.ನಾಗರಾಜು, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಕದರಿ ಲಕ್ಷ್ಮೀನರಸಿಂಹಸ್ವಾಮಿ ಸಮಿತಿ ಟ್ರಸ್ಟ್ನ ಮಂಜೇಗೌಡ, ವೆಂಕಟೇಶ್, ವಿರುಪಾಕ್ಷ, ಟಿ.ಪಿ.ನಾಗರಾಜು, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.