ಹಾಸನ: ‘ತಾಕತ್ತಿದ್ದರೆ ಹಾಸನ ವಿಧಾನಸಭಾ ಕ್ಷೇತ್ರದಿಂದಸ್ಪರ್ಧಿಸುವಂತೆ’ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಶಾಸಕ ಪ್ರೀತಂಗೌಡ ಮತ್ತೊಮ್ಮೆ ಪಂಥಾಹ್ವಾನ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ತಾಕತ್ತಿದ್ದರೆ ನಾನು ಹಾಸನದಲ್ಲಿ ಪ್ರೀತಂಗೌಡ ವಿರುದ್ಧ ಅಭ್ಯರ್ಥಿ ಎಂದು ಪ್ರಕಟಿಸಲಿ. ರಾಜಕಾರಣ ಮಾಡೋದಾದರೆ ಧೈರ್ಯವಾಗಿ ನನ್ನ ಎದುರು ಬಂದುರಾಜಕಾರಣ ಮಾಡಿ. ಆ ಧೈರ್ಯ ಇಲ್ಲದಿದ್ದರೆ ಸುಳ್ಳು ಯುದ್ಧ ಬೇಡ.ಅವರು ಚುನಾವಣೆಗೆ ನಿಂತರೆ ಮೂರನೇ ಸ್ಥಾನಕ್ಕೆ ಹೋಗ್ತಾರೆ. ರೇವಣ್ಣಸ್ಪರ್ಧಿಸಿದರೂ50 ಸಾವಿರ ಲೀಡ್ನಲ್ಲಿ ಗೆಲುತ್ತೇನೆ. 50 ಸಾವಿರಕ್ಕಿಂತ ಕಡಿಮೆ ಮತ ಬಂದರೆ ಅವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮರುಚುನಾವಣೆಗೆ ಹೋಗುವೆ’ ಎಂದು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
‘ನಾನು ಯಾರದೋ ದಾರಿಯಲ್ಲಿ ಹೋಗುವ ದಾಸಯ್ಯ ಅಲ್ಲ. ರಾಷ್ಟ್ರೀಯಪಕ್ಷದ ಶಾಸಕನಿದ್ದೇನೆ. ಜನಬೆಂಬಲ ಇದೆ. ಮಕ್ಕಳ ಹಾಗೆ ಮಾತಾಡೋದನ್ನು ಬಿಟ್ಟು ಗೌರವದಿಂದ ನಡೆದುಕೊಳ್ಳಬೇಕು. ಹಿಂಬಾಲಕರ ಮಾತು ಕೇಳಿಅಧಿಕಾರಿಗಳ ಬಗ್ಗೆ ಲಘುವಾಗಿ ಮಾತಾಡಿದರೆ ಗೌರವ ಕಳೆದುಕೊಳ್ಳುತ್ತೀರಾ’ ಎಂದು ಟಾಂಗ್ ನೀಡಿದರು.
‘ಹಾಸನ ಕ್ಷೇತ್ರದಿಂದ ನಿಲ್ಲುವಂತೆ 10 ಸಾರಿ ಹೇಳಿದ್ದೇನೆ. ಅವರಿಗೆ ಧೈರ್ಯಇದ್ದಿದ್ದರೆ ನಾನೇ ಅಭ್ಯರ್ಥಿ ಎನ್ನುತ್ತಿದ್ದರು. ಇಲ್ಲದ್ದಕ್ಕೆ ಹೀಗೆಲ್ಲಾ ಮಾತಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯೋರನ್ನ, ದೇವೇಗೌಡ್ರ ಹೆಸರೇಳಿ ರಾಜಕಾರಣಮಾಡುವವರನ್ನ ನಂಬಲ್ಲ’ ಎಂದರು.
ಟ್ರಕ್ ಟರ್ಮಿನಲ್ ವಿಚಾರವಾಗಿ ಮಾತನಾಡಿದ ಶಾಸಕರು, ‘ಪ್ರೀತಂ ಗೌಡಏನೇ ಮಾಡಿದ್ರೂ ಅದು ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತೆ.
ಮ್ಯೂಸಿಯಂ ಮಾಡ್ತೀವಿ ಅಂತೇಳಿ ಹುಡಾದಿಂದ ಜಾಗ ತೆಗೆದುಕೊಂಡು ಕಲ್ಯಾಣಮಂಟಪ ಕಟ್ಟಿದ್ದಾರೆ. ತಿಂಗಳಿಗೆ ₹ 50 ಲಕ್ಷ ದುಡಿಮೆ ಮಾಡ್ತಿದ್ದಾರೆ. ಆ ತರದ ಅನಿವಾರ್ಯತೆ ನನಗಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಏನು ಮಾಡಬೇಕು ಎಂಬುದು ಶಾಸಕನಾಗಿನನಗೆ ಗೊತ್ತಿದೆ. ನನ್ನ ಕ್ಷೇತ್ರದಲ್ಲಿ ಮೂಗು ತೋರಿಸೋಕೆ ಅವರಿಗೆ ಅಧಿಕಾರ ಕೊಟ್ಟಿರೋರು ಯಾರು ಎಂದು ಪ್ರಶ್ನಿಸಿದ ಅವರು, ನನ್ನನ್ನು ಹೆದರಿಸುವುದು70-80 ರ ದಶಕದಲ್ಲೇ ಮುಗಿದು ಹೋಯ್ತು’ ಎಂದು ಗುಡುಗಿದರು.
‘ಹೊಳೆನರಸೀಪುರದಲ್ಲಿ ಏನು ಬೇಕೋ ಅದನ್ನು ಮಾಡಿಕೊಳ್ಳಲಿ. ಅವರು ಗಾಜಿನ ಮನೆಯಲ್ಲಿ ಕೂತಿದ್ದಾರೆ, ಸಮಾಧಾನವಾಗಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಅವರ ಅಕ್ರಮವನ್ನು ಬಿಚ್ಚಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
‘ಗೋಲಿಬಾರ್ ಮಾಡಿಸುವೆ ಎಂದರೆ ಜನರು ದಡ್ಡರಲ್ಲ. ಅವರನ್ನು ನಂಬಿಪ್ರತಿಭಟನೆ ಮಾಡೋಕೆ ಕಾರ್ಯಕರ್ತರೇನು ದಡ್ಡರಿಲ್ಲ. ಅವರ
ಅಂಧಾಭಿಮಾನಿಗಳು ಹೋಗಿ ಸುಮಾರು ವರ್ಷ ಕಳೆದಿವೆ’ ಎಂದುತಿರುಗೇಟು ನೀಡಿದರು.
‘ಟ್ರಕ್ ಟರ್ಮಿನಲ್ ಜಾಗದಲ್ಲಿ ಯಾರೂ ನಿವೇಶನ ರಹಿತರಿಲ್ಲ ಅಂತ ಕಂದಾಯಸಚಿವರು ಹೇಳಿದ್ದಾರೆ. ಈ ಜಾಗದ ಅವಶ್ಯಕತೆ ವಿಶ್ವವಿದ್ಯಾಲಯಕ್ಕೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಇದರ ನಡುವೆ ಪ್ರಶ್ನೆ ಮಾಡುವುದಕ್ಕೆಇವರು ಯಾರು’ ಎಂದು ಖಾರವಾಗಿ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.