
ಬೇಲೂರು: ಅಬಕಾರಿ ನಿಯಮಗಳನ್ನು ಮೀರಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ, ಮದ್ಯದಂಗಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಡಿಪಿ ಸದಸ್ಯ ಅಬಕಾರಿ ಇಲಾಖೆಯ ದಾಪೇದಾರ್ ಪ್ರದೀಪ್ ಅವರಿಗೆ ಅಧಿಕಾರಿಗೆ ದೂರು ಸಲ್ಲಿಸಿದರು.
ಕೆಡಿಪಿ ಸದಸ್ಯ ಚೇತನ್.ಸಿ.ಗೌಡ ಮಾತನಾಡಿ, 'ಪಟ್ಟಣದಲ್ಲಿರುವ ಸಿಎಲ್ 2, ಸಿಎಲ್ 7, ಸಿಎಲ್, 9 ಮದ್ಯದಂಗಡಿಗಳಿಗೆ ಅಬಕಾರಿ ಇಲಾಖೆಯ ನಿಯಮಗಳಿದ್ದು, ಅದರಂತೆ ಮದ್ಯ ಮಾರಾಟ ಮಾಡಬೇಕು. ಆದರೆ ಕೆಲ ಮದ್ಯದಂಗಡಿಗಳ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆ ಪಡೆಯುತ್ತಿರುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಇಂತಹ ವ್ಯವಹಾರವು ಹಲವಾರು ದಿನಗಳಿಂದ ನಡೆಯುತ್ತಿದ್ದು, ಸಿಎಲ್ 2 ನಲ್ಲಿ ಕೇವಲ ಮದ್ಯ ಮಾರಾಟ ಮಾಡಬೇಕು, ಸಿಎಲ್ 7ನಲ್ಲಿ ಕುಳಿತು ಸೇವನೆ ಮಾಡುವ ವ್ಯವಸ್ಥೆ ಮಾಡಿರಬೇಕು. ಸಿಎಲ್ 9 ಮದ್ಯದ ಮಾರಾಟದ ಜತೆಗೆ ಉಪಹಾರ ವ್ಯವಸ್ಥೆಯ ಕೊಠಡಿ ಇರಬೇಕೆಂಬ ನಿಯಮವಿದ್ದರೂ ಅದೆಲ್ಲವನ್ನೂ ಗಾಳಿಗೆ ತೂರಿದ್ದಾರೆ. ಶೌಚಲಯಗಳಿಲ್ಲದೆ ಕೆಲ ಮದ್ಯದಂಗಡಿಗಳು ನಡೆಯುತ್ತಿವೆ. ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಮದ್ಯದಂಗಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು" ಎಂದು ಎಚ್ಚರಿಸಿದರು.
ಕೆಡಿಪಿ ಸದಸ್ಯ ನವೀನ್, ಗ್ಯಾರಂಟಿ ಸಮಿತಿ ಸದಸ್ಯ ನಿಶ್ಚಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.