ADVERTISEMENT

‘ಜೀವನದ ಪ್ರತಿಬಿಂಬವೇ ​ಸಾಹಿತ್ಯ’

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:24 IST
Last Updated 12 ಅಕ್ಟೋಬರ್ 2020, 8:24 IST
ಹಾಸನ ನಗರದ ಸಂಸ್ಕೃತ ಭವನದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಚ.ನಾ. ಅನಂತರಾಜು ಅವರ ‘ಸಿಡಿಲ ಮೊಗ್ಗು’ ಪುಸ್ತಕ ಬಿಡುಗಡೆ ಮಾಡಲಾಯಿತು
ಹಾಸನ ನಗರದ ಸಂಸ್ಕೃತ ಭವನದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಚ.ನಾ. ಅನಂತರಾಜು ಅವರ ‘ಸಿಡಿಲ ಮೊಗ್ಗು’ ಪುಸ್ತಕ ಬಿಡುಗಡೆ ಮಾಡಲಾಯಿತು   

ಹಾಸನ: ‘ಸಾಹಿತ್ಯ ಎಂದರೆ ಜೀವನದ ಪ್ರತಿಬಿಂಬ. ಜೀವನ ಹೇಗಿರುತ್ತದೆ, ಹೇಗಿರಬೇಕು ಎಂಬುದನ್ನು ಅದು ತಿಳಿಸಿಕೊಡುತ್ತದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಅಭಿಪ್ರಾಯಪಟ್ಟರು.

ನಗರದ ಸಂಸ್ಕೃತ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಚ.ನಾ. ಅನಂತರಾಜು ಅವರ ‘ಸಿಡಿಲ ಮೊಗ್ಗು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಸಾಹಿತ್ಯ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದಿಂದ ಸಿಗುವ ನೆಮ್ಮದಿ, ಆತ್ಮತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ’ ಎಂದು ಹೇಳಿದರು.

‘ಕನ್ನಡ ಭಾಷೆಯು ಆಡಳಿತ ಭಾಷೆಯಾದರೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಗ್ರಾಮೀಣ ಜನರು ಸರ್ಕಾರಿ ಕಚೇರಿ ಕೆಲಸಕ್ಕೆ ಬಂದಾಗ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಉತ್ತಮವಾಗಿದೆ. ಕನ್ನಡ ಪ್ರಾಚೀನ ಇತಿಹಾಸವಿರುವ ಸಮೃದ್ಧ ಭಾಷೆ. ಕನ್ನಡ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆ, ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿದ್ದಾರೆ. ಇದು ನಿಜಕ್ಕೂ ದುರಂತವೆ ಸರಿ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಕನ್ನಡಿಗರೇ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತರೆ ರಾಜ್ಯಗಳಲ್ಲಿ ತಮ್ಮ ಮಾತೃ ಭಾಷೆಯ ಬಗ್ಗೆ ಎಷ್ಟು ಪ್ರೇಮವಿದೆ ಎಂಬುದು ತಿಳಿಯಬೇಕು. ಆದರೆನಮ್ಮಲ್ಲಿ ಏನಾಗಿದೆ’ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಂ ಅಧ್ಯಕ್ಷ ಎಸ್.ಕೆ. ಸತ್ಯನಾರಾಯಣ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಕೆ. ಜಯಚಂದ್ರ, ಕಾರ್ಯದರ್ಶಿ ಎನ್. ರಮೇಶ್, ಜಿಲ್ಲಾ ಸಂಯೋಜಕ ಎಚ್‌.ಎನ್‌. ನಾಗೇಂದ್ರ ಕಟ್ಟೆಮನೆ, ಉಪಾಧ್ಯಕ್ಷ ಶ್ರೀನಿವಾಸ್ ಗೌಡ, ಸಹ ಕಾರ್ಯದರ್ಶಿ ಕೆ. ಗೋವಿಂದ ಶರ್ಮ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.