ಹಾಸನ: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್ 14 ರಿಂದ 21ರವರೆಗೆ ಲಾಕ್ಡೌನ್ ಮುಂದುವರಿಸಿಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.
ವೈದ್ಯಕೀಯ ಸೇವೆಗಳು, ನ್ಯಾಯಬೆಲೆ ಅಂಗಡಿ, ಹಾಲಿನ ಬೂತ್ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಗತ್ಯ ವಸ್ತುಗಳು, ತರಕಾರಿ ಖರೀದಿ, ಬ್ಯಾಂಕ್, ಎಲ್ಐಸಿ ,ಅಂಚೆ ಕಚೇರಿ, ರೈತ ಸಂಪರ್ಕ ಕೇಂದ್ರ, ರಸಗೊಬ್ಬರ, ಕೀಟನಾಶಕ ಹಾಗೂ ಕೃಷಿ ಯಂತ್ರೋಪಕರಣಗಳ ಮಳಿಗೆ ತೆರೆಯಲು ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಅನುಮತಿ ನೀಡಲಾಗಿದೆ.
ಉಳಿದ ನಾಲ್ಕು ದಿನ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ಡೌನ್ ಇರಲಿದೆ. ಪ್ರತಿ ದಿನ ಹಣ್ಣು, ಅಗತ್ಯ ವಸ್ತುಗಳ ಹೋಂಡೆಲಿವರಿಗೆ ಅವಕಾಶ ಕಲ್ಪಿಸಲಾಗಿದೆ.
ನಿಷೇಧಾಜ್ಞೆ ಅವಧಿಯಲ್ಲಿ ಸರಕು ಸಾಗಾಟದ ವಾಹನಗಳನ್ನು ಹೊರತುಪಡಿಸಿ,ಯಾವುದೇ ವಾಹನ ಸಂಚಾರ ಹಾಗೂ ವ್ಯಕ್ತಿಗಳ ಓಡಾಟ ಕಂಡು ಬಂದಲ್ಲಿ ವಿಪತ್ತುನಿರ್ವಹಣಾ ಕಾಯ್ದೆ ಅನ್ವಯ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಡಿ.ಸಿ. ಆದೇಶಿಸಿದ್ದಾರೆ.
ಬಿಗಿ ಕ್ರಮ: ಜನ ಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮತ್ತಷ್ಟು ಬಿಗಿ ಕ್ರಮ ಜಾರಿಗೊಳಿಸಿದೆ. ಲಾಕ್ಡೌನ್ ಘೋಷಿಸಿದ ದಿನದಿಂದ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್, ಪೊಲೀಸ್ ಭದ್ರತೆ, ಸ್ಥಳೀಯ ಸಂಸ್ಥೆಗಳಿಂದ ಕಾರ್ಯಾಚರಣೆ, ಅನಗತ್ಯ ಸಂಚಾರಕ್ಕೆ ಕಡಿವಾಣ, ವಾರದಲ್ಲಿ ಮೂರು ದಿನ ಅಗತ್ಯವಸ್ತುಗಳ ಖರೀದಿಗಷ್ಟೇ ಅವಕಾಶ ಸೇರಿದಂತೆ ಇನ್ನು ಹಲವು ಕ್ರಮ ಕೈಗೊಂಡಿದ್ದರೂ ಜಿಲ್ಲೆಯ ಸಾರ್ವಜನಿಕರು ನಿಯಮ ಉಲ್ಲಂಘಿಸುತ್ತಿದ್ದಾರೆ.
ಮುಖ್ಯರಸ್ತೆಗಳಲ್ಲಿ ಮರದ ದಿಮ್ಮಿಗಳನಿಟ್ಟು ಯಾರೂ ಓಡಾಡದಂತೆ ಮಾಡಿದೆ.ಕಾಟಾಚಾರಕ್ಕೆ ಎಂಬಂತೆ ಇದ್ದ ಚೆಕ್ಪೋಸ್ಟ್ಗಳು ಕಾರ್ಯಪ್ರವೃತ್ತವಾಗಿದ್ದು, ಪ್ರತಿವಾಹನಗಳ ಪರಿಶೀಲನೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಕಾರಣವಿಲ್ಲದೆ ರಸ್ತೆಗಿಳಿದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ತಿಂಗಳಿನಿಂದ ಐದು ಸಾವಿರ ವಾಹನಗಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.