
ಶ್ರವಣಬೆಳಗೊಳ: ‘ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಮಾನಸಿಕ ಒತ್ತಡ, ಖಿನ್ನತೆ, ನಿದ್ರಾಹೀನತೆಗೆ ದಾರಿಯಾಗಲಿದೆ. ಈ ವ್ಯಸನದಿಂದ ಜೀವನದಲ್ಲಿ ಅಶಾಂತಿ ಉಂಟಾಗಲಿದೆ’ ಎಂದು ಚನ್ನರಾಯಪಟ್ಟಣದ ಮಾಜಿ ಪುರಸಭಾ ಅಧ್ಯಕ್ಷೆ ಕೆ.ಎನ್.ಬನಶಂಕರಿ ಹೇಳಿದರು.
ಪಟ್ಟಣದ ಧರ್ಮಸ್ಥಳ ಮಂಜುನಾಥ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣದ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಕುರಿತು ಅವರು ಮಾತನಾಡಿದರು. ‘ಜಾಲತಾಣಗಳ ಬಳಕೆ ನಿಯಂತ್ರಣದಲ್ಲಿಲ್ಲದಿದ್ದರೆ ದೊಡ್ಡವರ ಸಮೇತ ಮಕ್ಕಳ ಭವಿಷ್ಯ ಕುಂಠಿತವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.
ಪದ್ಮಾವತಿ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಆಲಿಯಾ ಬರಾಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಟ್ರಸ್ಟ್ ನ ನಿರ್ದೇಶಕ ಯೋಗೀಶ ಎ, ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಜಯರಾಂ ತೋಟಿ ಸದಸ್ಯ ರಾಘವೇಂದ್ರ ಬಿ.ಎನ್, ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಶಾಲಿನಿ ಬಾಹುಬಲಿ ಮಾತನಾಡಿ, ‘ಪ್ರಾಥಮಿಕ, ಪ್ರೌಢ ಹಂತದ ವಿದ್ಯಾರ್ಥಿಗಳಿಂದ ಮೊಬೈಲ್ ಫೋನ್ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕಡಿವಾಣ ಹಾಕದೇ ಇದ್ದರೆ ಯುವ ಜನಾಂಗ ಸಮಾಜಕ್ಕೆ ಕಂಟಕ ಪ್ರಾಯರಾಗುತ್ತಾರೆ’ ಎಂದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ತಯಾರಿಕೆ ಏರ್ಪಡಿಸಿದ್ದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಯೋಜನಾಧಿಕಾರಿ ಪುರಂಧರ ಸಮನ್ವಯಾಧಿಕಾರಿ ಸರಸ್ವತಿ ಮೇಲ್ವಿಚಾರಕ ಸುರೇಶ್, ಕೃಷಿ ಮೇಲ್ವಿಚಾರಕ ಮಹದೇವ್ ಪ್ರಸಾದ್, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.