ADVERTISEMENT

ಅಪಘಾತ: ಗಾಯಾಳುಗಳಿಗೆ ನೆರವಾದ ಸಚಿವ ಕೆ.ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 13:29 IST
Last Updated 5 ಸೆಪ್ಟೆಂಬರ್ 2020, 13:29 IST
ಹಿರೀಸಾವೆ ಸಮೀಪದ ಗೂಳಿಹೊನ್ನೇನಹಳ್ಳಿ ಬಳಿ ಶನಿವಾರ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಕಾರು
ಹಿರೀಸಾವೆ ಸಮೀಪದ ಗೂಳಿಹೊನ್ನೇನಹಳ್ಳಿ ಬಳಿ ಶನಿವಾರ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಕಾರು   

ಹಿರೀಸಾವೆ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಕಾರಿನಲ್ಲಿದ್ದ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನೆರವಾದರು.

ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರಿನಿಂದ ಹಾಸನಕ್ಕೆ ಸಚಿವರು ಪ್ರಯಾಣಿಸುತ್ತಿದ್ದಾಗ ಹಿರೀಸಾವೆ– ಚನ್ನರಾಯಪಟ್ಟಣ ಮಧ್ಯದಲ್ಲಿರುವ ಗೂಳಿಹೊನ್ನೇನಹಳ್ಳಿ (ಸೋಮವಾರಸಂತೆ) ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿತ್ತು. ಅದನ್ನು ಗಮನಿಸಿದ ಸಚಿವರು ಅವರ ವಾಹನ ನಿಲ್ಲಿಸಿ, ಸಾರ್ವಜನಿಕರ ಸಹಾಯದಿಂದ ಕಾರಿನಲ್ಲಿ ಇದ್ದವರನ್ನು ರಕ್ಷಿಸಿ ಉಪಚರಿಸಿದರು. ಆಪ್ತ ಸಹಾಯಕರ ಕಾರಿನಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ದಂಪತಿ ನಾಗೇಶ್ ಮತ್ತು ದೀಪಿಕಾ ಅವರು ಬೆಂಗಳೂರಿನಿಂದ ತೀರ್ಥಹಳ್ಳಿಗೆಪ್ರಯಾಣಿಸುತ್ತಿದ್ದರು. ಸಣ್ಣಪುಟ್ಟ ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ಕೊಡಿಸಿ ಬದಲಿ ವಾಹನದಲ್ಲಿ ತೀರ್ಥಹಳ್ಳಿಗೆ ಕಳುಹಿಸಿ ಕೊಡುವಂತೆ ಗೋಪಾಲಯ್ಯ ಸೂಚನೆ ನೀಡಿದರು. ಅದರಂತೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ ಎಂದು ತಹಶೀಲ್ದಾರ್ ಜೆ.ಮಾರುತಿ ಹೇಳಿದರು.

ADVERTISEMENT

ಚನ್ನರಾಯಪಟ್ಟಣದ ಸಂಚಾರ ಪೊಲೀಸ್ ಠಾಣೆಯ ಎಸ್ಐ ಬಾಲುಗೌಡ ಗಾಯಾಳುಗಳಿಂದ ಮಾಹಿತಿ ಪಡೆದು, ಅಪಘಾತ ಪ್ರಕರಣ ದಾಖಲಿಸಿದ್ದಾರೆ. ಕರವೇ ನಾಗೇಂದ್ರ ಬಾಬು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.