
ಅರಸೀಕೆರೆ: ‘ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣ ನೀರಾವರಿ ಒದಗಿಸಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದೇ ನನ್ನ ಆದ್ಯ ಕರ್ತವ್ಯ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಗೀಜಿಹಳ್ಳಿಯ ಪಂಚಾಯಿತಿಯ ಬೋರನಕೊಪ್ಪಲು ಗ್ರಾಮದಿಂದ ಮಣ್ಣು ಮಾಕನಹಳ್ಳಿ ವರೆಗೆ ₹ 1 ಕೋಟಿ ವೆಚ್ಚದ ಡಾಂಬರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ರೈತರ ಏಳಿಗೆಗೆ ನೀರು ಹಾಗೂ ವಿದ್ಯುತ್ ಒದಗಿಸಲಾಗುವುದು. ಎತ್ತಿನ ಹೊಳೆ ಯೋಜನೆಗೆ ₹200 ಕೋಟಿ ಅನುದಾನಕ್ಕಾಗಿ ಸರ್ಕಾರದ ಗಮನ ಸೆಳೆದು ತರಲಾಗಿದೆ’ ಎಂದರು.
ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ದರ್ಶನಕ್ಕಾಗಿ ಬೋರನಕೊಪ್ಪಲು, ಹಾರನಹಳ್ಳಿ, ಮುರುಂಡಿ , ಸಂಕೋಡ್ನಹಳ್ಳಿ ಸೇರಿದಂತೆ ಎಲ್ಲ ಕಡೆಯಿಂದಲೂ ಸುಗಮ ಸಂಚಾರಕ್ಕಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಗ್ಯಾರಂಟಿ ತಾಲ್ಲೂಕು ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಕ್ಷೇತ್ರದ ಶಿಕ್ಷಣದ ಅಭಿವೃದ್ದಿಗೆ ಶಾಸಕರ ಶ್ರಮ ಹೇಳತೀರದು. ಬೋರನಕೊಪ್ಪಲು ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಮುಂದಾಗಿದ್ದಾರೆ ಎಂದರು.
ಮುಖಂಡರಾದ ಯಾಳವಾರೆ ಕೇಶವಣ್ಣ. ಬೈರೇಶ್, ಧರ್ಮಣ್ಣ, ನಾಗರಾಜ್, ರವಿ, ಈರಣ್ಣ,ಕಾಂತರಾಜ್, ಸ್ವಾಮಣ್ಣ, ಸಹ್ಯಾದ್ರಿ ದೇವರಾಜು, ಗುತ್ತಿಗೆದಾರ ಜ್ಞಾನೇಶ್, ಬೋರನಕೊಪ್ಪಲು ಶಿವಲಿಂಗಣ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.