ADVERTISEMENT

ಚಳವಳಿ, ಮಾಧ್ಯಮ ಸಮಾಜಮುಖಿಯಾಗಿರಲಿ: ಜಾಣಗೆರೆ ವೆಂಕಟರಾಮಯ್ಯ

ಸಂವಾದದಲ್ಲಿ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 7:17 IST
Last Updated 18 ಅಕ್ಟೋಬರ್ 2021, 7:17 IST
ಹಾಸನ ನಗರದ ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಜಯ ಕರ್ನಾಟಕ ಸಂಘಟನೆಗೆ 14 ವರ್ಷ ತುಂಬಿದ ಕಾರ್ಯಕ್ರಮವನ್ನು ಜಾಣಗೆರೆ ವೆಂಕಟರಾಮಯ್ಯ ಉದ್ಘಾಟಿಸಿದರು. ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ರಾಜ್ಯ ಕಾರ್ಯದರ್ಶಿ ಎಚ್. ರಾಮಚಂದ್ರಯ್ಯ, ಜಿಲ್ಲಾಧ್ಯಕ್ಷ ಡಿ.ಪಿ. ಸೋಮೇಶ್. ಜಿಲ್ಲಾ ಉಸ್ತುವಾರಿ ವೈ.ಜಿ. ಅಶೋಕ್ ಕುಮಾರ್, ರಾಜ್ಯ ಸಂಚಾಲಕ ಎಸ್. ಉಮೇಶ್, ಎಂ.ಕೆ.ಆರ್, ಪ್ರಚಾರಕ ಉಸ್ತುವಾರಿ ಉದಯಕುಮಾರ್ ಇದ್ದರು
ಹಾಸನ ನಗರದ ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಜಯ ಕರ್ನಾಟಕ ಸಂಘಟನೆಗೆ 14 ವರ್ಷ ತುಂಬಿದ ಕಾರ್ಯಕ್ರಮವನ್ನು ಜಾಣಗೆರೆ ವೆಂಕಟರಾಮಯ್ಯ ಉದ್ಘಾಟಿಸಿದರು. ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ರಾಜ್ಯ ಕಾರ್ಯದರ್ಶಿ ಎಚ್. ರಾಮಚಂದ್ರಯ್ಯ, ಜಿಲ್ಲಾಧ್ಯಕ್ಷ ಡಿ.ಪಿ. ಸೋಮೇಶ್. ಜಿಲ್ಲಾ ಉಸ್ತುವಾರಿ ವೈ.ಜಿ. ಅಶೋಕ್ ಕುಮಾರ್, ರಾಜ್ಯ ಸಂಚಾಲಕ ಎಸ್. ಉಮೇಶ್, ಎಂ.ಕೆ.ಆರ್, ಪ್ರಚಾರಕ ಉಸ್ತುವಾರಿ ಉದಯಕುಮಾರ್ ಇದ್ದರು   

ಹಾಸನ: ‘ಚಳವಳಿ ಮತ್ತು ಮಾಧ್ಯಮ ಎರಡೂ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಜನರಿಗೆ ಹತ್ತಿರವಾಗುತ್ತದೆ’ ಎಂದು ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.

ನಗರದ ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜಯ ಕರ್ನಾಟಕ ಸಂಘಟನೆಗೆ 14ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಚಳವಳಿ ಮತ್ತು ಮಾಧ್ಯಮ’ ಕುರಿತ ಸಂವಾದ, 108 ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪೊಲೀಸರಿಗೆ ಮತ್ತು ಪತ್ರಕರ್ತರಿಬ್ಬರಿಗೂ ಜನರು ಮುಂದೆ ನಮಸ್ಕಾರ ಮಾಡಿ ಹಿಂದೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಇದಕ್ಕೆ ವಿವಿಧ ಕಾರಣಗಳು ನಮ್ಮ ಕಣ್ಣ ಮುಂದೆ ಕಾಣಬಹುದು. ಹಾಗಾಗಿ ಚಳವಳಿ ಮತ್ತು ಮಾಧ್ಯಮ ಎರಡೂ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತಿದೆ. ಆರಂಭದ ದಿನಗಳ ಪತ್ರಿಕೋದ್ಯಮಕ್ಕೂ ಇಂದಿಗೂ ಸಾಕಷ್ಟು ವ್ಯತ್ಯಾಸವಿದೆ. ಸಂಘಟನೆಗಳು ಕೇವಲ ಹಕ್ಕಿಗಾಗಿ ಹೋರಾಟವೇ? ಎಂಬ ಪ್ರಶ್ನೆ ಒಂದು ಕಡೆ ಬಂದರೇ ಮತ್ತೊಂದು ಕಡೆ ಮಾಧ್ಯಮದಲ್ಲೂ ಕೂಡ ನಿರ್ದಿಷ್ಟಭದ್ರತೆ ಇಲ್ಲ. ಅಭದ್ರತೆಯಲ್ಲಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮಾಧ್ಯಮ ಮತ್ತು ಚಳವಳಿ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಪೂರಕವಾಗಿದೆ. ಮಾಧ್ಯಮ ಮತ್ತು ಚಳವಳಿಯ ಹಿಂದಿನಿಂದಲೂ ಒಟ್ಟಿನಲ್ಲಿ ಪ್ರಯಾಣಿಸುತ್ತಿದೆ. ಸ್ವಾತಂತ್ಯ ಪೂರ್ವದಲ್ಲೂ ಪತ್ರಕರ್ತರು ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ’ ಎಂದರು.

‘ಚಳವಳಿಗಳನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಮಾಧ್ಯಮ ಸಾಗಬೇಕು. ಪ್ರಸ್ತುತದಲ್ಲಿ ಮಾಧ್ಯಮವು ಬಂಡವಾಳಶಾಹಿ ಹಿಡಿತಕ್ಕೆ ಸಿಲುಕಿದೆ. ಅವರು ಹೇಳಿದಂತೆ ಬರಹ ಬರಬೇಕಾದ ಪರಿಸ್ಥಿತಿ ಬಂದಿದೆ’ ಎಂದು ವಿಷಾದಿಸಿದರು.

ಕಾರ್ಯಕ್ರಮಕ್ಕೆ ಮೊದಲು ಸಂಘಟನೆಯ ಧ್ವಜಾರೋಹಣ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. 108 ಸಾಧಕರಿಗೆ ಗೌರವ ಸಮರ್ಪಣೆ ನಡೆಸಲಾಯಿತು. ಖಾಸಗಿ ಚಾನಲ್ ಕಲಾವಿದೆ ನೇಹಾ ತಮ್ಮ ಹಾಡಿನ ಮೂಲಕ ರಂಜಿಸಿದರು. ಬೇಲೂರಿನ ಎಂ.ಡಿ. ಪೃಥ್ವಿ ಅವರ ಭರನಾಟ್ಯ ಗಮನಸೆಳೆಯಿತು. ಕಲಾವಿದ ದೇಸಾಯಿ ಅವರು ಬೃಹತ್ ಚಿತ್ರವನ್ನು ಬಿಡಿಸಿ ಸಂಘಟನೆಯ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮದಲ್ಲಿ ಜಯ ಕರ್ನಾಟಕಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ರಾಜ್ಯ ಕಾರ್ಯದರ್ಶಿ ಎಚ್. ರಾಮಚಂದ್ರಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ. ಸೋಮೇಶ್. ಜಿಲ್ಲಾ ಉಸ್ತುವಾರಿ ವೈ.ಜಿ. ಅಶೋಕ್ ಕುಮಾರ್, ರಾಜ್ಯ ಸಂಚಾಲಕ ಎಸ್. ಉಮೇಶ್, ಎಂ.ಕೆ.ಆರ್, ಪ್ರಚಾರಕ ಉಸ್ತುವಾರಿ ಉದಯಕುಮಾರ್, ಎಂಸಿಇ ಕಾಲೇಜಿನ ಆರ್.ಟಿ. ದೇವೇಗೌಡ, ಚೌಡಹಳ್ಳಿ ಜಗದೀಶ್, ಹಾಸನ ತಾಲ್ಲೂಕು ಅಧ್ಯಕ್ಷ ಮನು, ಲಕ್ಷ್ಮಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.