ADVERTISEMENT

ಸಚಿವ ಸ್ಥಾನಕ್ಕೆ ಲಾಬಿ ಮಾಡುವಷ್ಟು ದೊಡ್ಡವನಲ್ಲ: ಪ್ರೀತಂ ಗೌಡ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 15:25 IST
Last Updated 28 ಜುಲೈ 2021, 15:25 IST
ಪ್ರೀತಂ ಜೆ.ಗೌಡ
ಪ್ರೀತಂ ಜೆ.ಗೌಡ   

ಹಾಸನ: ‘ಭಾರತೀಯ ಜನತಾ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಆದರೆ, ಯಾರ ಹತ್ತಿರವೂ ಹೋಗಿ ಸಚಿವ ಸ್ಥಾನ ನೀಡುವಂತೆ ಒತ್ತಡಹಾಕುವುದಿಲ್ಲ’ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

‘ಟಾಸ್ಕ್‌ ಮಾಸ್ಟರ್‌ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ಸಮರ್ಥವಾಗಿ ಮಾಡುವುದು ನನ್ನ ಕೆಲಸ. ನಾನು ಸಾಮಾನ್ಯ ಶಾಸಕನಾಗಿದ್ದು, ಸಚಿವ ಸ್ಥಾನಕ್ಕೆ ಲಾಭಿ ಮಾಡುವಷ್ಟು ದೊಡ್ಡವನಲ್ಲ’ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಆಗುವುದಿಲ್ಲವೆಂದು ಎಲ್ಲಾ ಶಾಸಕರಂತೆನಾನು ನಂಬಿದ್ದೆ. ಅವರು ಪ್ರಶ್ನಾತೀತ ನಾಯಕ. ಅವರನ್ನು ಯಾರೂ ಸಿ.ಎಂ ಸ್ಥಾನದಿಂದಇಳಿಸಿಲ್ಲ. ಯುವಕರಿಗೆ ಅವಕಾಶ ಮಾಡಿಕೊಡಲು ಸ್ವಯಂ ಪ್ರೇರಿತರಾಗಿ ರಾಜೀನಾಮೆನೀಡಿದ್ದಾರೆ. ಮನಸ್ಸು ಮಾಡಿದ್ದರೆ ಇನ್ನೂ ಎರಡು ವರ್ಷ ಅವರೇ ಸಿ.ಎಂ ಸ್ಥಾನದಲ್ಲಿಮುಂದುವರಿಯಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಎಲ್ಲರ ಸಲಹೆ ಸೂಚನೆ ಪಡೆದು ಸರ್ವಾನುಮತದಿಂದ ಬೊಮ್ಮಾಯಿ ಅವರನ್ನುಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.

'ಜೀವನದಲ್ಲಿ ಯಡಿಯೂರಪ್ಪ ಸೋತಿಲ್ಲ. ಅವರ ರಾಜೀನಾಮೆಯ ಹಿಂದೆ ಮುಂದಿನ ಗೆಲುವಿನ ಬಗ್ಗೆ ದೂರದೃಷ್ಠಿ ಇರುತ್ತದೆ. ರಾಜ್ಯದಲ್ಲಿ ಅವರು ಹೋದ ಕಡೆ 5 ನಿಮಿಷದಲ್ಲಿ 5 ಸಾವಿರ ಜನ ಸೇರಿಸುವ ಶಕ್ತಿ ಇರುವ ನಾಯಕ. ಮುಂದಿನ ಚುನಾವಣೆಯಲ್ಲಿಯೂ ಪಕ್ಷ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲಿದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

‘ರಾಜ್ಯದ ಯಾವ ಶಾಸಕ ಅಥವಾ ಮಂತ್ರಿ ಪರೀಕ್ಷೆ ಬರೆದರೂ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡುವುದು ಯಡಿಯೂರಪ್ಪ ಎಂದು ಕೆಲವರಿಗೆ ಗೊತ್ತಿಲ್ಲ. ಪಾಸು, ಫೇಲು ಯಡಿಯೂರಪ್ಪ ಅವರೇ ಘೋಷಣೆ ಮಾಡಬೇಕು’ ಎಂದು ಸಿ.ಪಿ.ಯೋಗೇಶ್ವರ್‌ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಬಿ.ವೈ.ವಿಜಯೇಂದ್ರ ಅವರು ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟಿಸಲುಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಪಕ್ಷದಲ್ಲಿ ಯಾವ ಸ್ಥಾನ ನೀಡಬೇಕು ಎಂದು ಹೈಕಮಾಂಡ್‌ ನಿರ್ಧಾರ ಮಾಡಲಿದೆ. ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆಉತ್ತರಿಸಿದರು.

‘ರಾಜ್ಯದಲ್ಲಿ ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಸಿ.ಎಂ ಆಗಿರುತ್ತಾರೆ. ಅವರನ್ನುಯಾವುದೇ ಕಾರಣಕ್ಕೂ ಕೆಳಗಿಳಿಸುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುತ್ತೇನೆ’ ಎಂಬಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಅವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆಯೇ ಹೊರತು, ಕೆಳಗಿಳಿಸಿಲ್ಲ. ವಿರೋಧ ಪಕ್ಷದವರಿಗೆ ಜಿಲ್ಲೆಯಲ್ಲಿ ನನ್ನ ಬಗ್ಗೆ ಮಾತನಾಡಲು ಏನುವಿಷಯ ಇಲ್ಲದೇ ಈ ರೀತಿ ಪ್ರಚಾರ ನೀಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.