ADVERTISEMENT

ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು:ಎನ್‌ಎಸ್‌ಎಸ್‌ ಶಿಬಿರದಲ್ಲಿ ಮಂಡ್ಯ ಡಿಸಿಕುಮಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:01 IST
Last Updated 8 ಅಕ್ಟೋಬರ್ 2025, 5:01 IST
ಹಾಸನ ತಾಲ್ಲೂಕಿನ ಬಿಡಾರದಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್‌ ಶಿಬಿರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ ಮಾತನಾಡಿದರು
ಹಾಸನ ತಾಲ್ಲೂಕಿನ ಬಿಡಾರದಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್‌ ಶಿಬಿರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ ಮಾತನಾಡಿದರು   

ಹಾಸನ: ಸಮಾಜದಲ್ಲಿ ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು. ವ್ಯಕ್ತಿತ್ವಕ್ಕೆ ವ್ಯಕ್ತಿಯನ್ನು ಗೆಲ್ಲುವ ಶಕ್ತಿ ಇರುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿಡಾರದಹಳ್ಳಿ ಗ್ರಾಮದಲ್ಲಿ ನಗರದ ಎಂ.ಜಿ. ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಪ್ರಜ್ಞೆ, ನಾಡ–ನುಡಿಯ ಬಗ್ಗೆ ಅಭಿಮಾನ, ದೇಶಾಭಿಮಾನ, ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ವಿದ್ಯಾರ್ಥಿ ದೆಸೆಯಲ್ಲೇ ಮನಸ್ಸಿನಲ್ಲಿ ಭದ್ರವಾಗಿ ಬೇರೂರಬೇಕು. ಇದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಗಳಿಂದ ಸಾಧ್ಯ. ಶಿಕ್ಷಣಕ್ಕೆ ಪೂರಕವಾದ ಇಂತಹ ಯೋಜನೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತವೆ ಎಂದು ತಿಳಿಸಿದರು.

ADVERTISEMENT

ಬೂದೇಶ್ವರ ಮಠದ ಧರ್ಮದರ್ಶಿ ತಮ್ಮಣ್ಣಗೌಡ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆ ಕುರಿತು ಅರಿವು, ಶಾಂತಿಪಾಲನೆ, ಶಿಸ್ತು, ಸಂಯಮ ಕಲಿಸುವ ಕಾರ್ಯಕ್ರಮ. ಉನ್ನತ ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಉನ್ನತ ಚಿಂತನೆಯು ಮುಖ್ಯ ಎಂದರು.

ಬೂದೇಶ್ವರ ಮಠದ ಮಾಜಿ ಧರ್ಮದರ್ಶಿ ಮೂರ್ತಣ್ಣ ಮಾತನಾಡಿ, ಗ್ರಾಮದಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು, ಮೊಬೈಲ್‍ಗಳಿಂದ ವಿದ್ಯಾರ್ಥಿಗಳು ದೂರವಿದ್ದು ಗ್ರಾಮೀಣರಂತೆಯೇ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ಹಾಸನ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಯೋಗೇಶ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ದೇಶಕ್ಕೆ ಮಹಾತ್ಮ ಗಾಂಧೀಜಿಯವರ ಅದ್ಭುತ ಕೊಡುಗೆ. ಕೇವಲ 400 ಜನರಿಂದ ಪ್ರಾರಂಭವಾದ ಇದು ಇಂದು 40 ಕೋಟಿ ಸದಸ್ಯರನ್ನು ಹೊಂದಿದ್ದು, ಸೇವೆಯೇ ಪರಮಧರ್ಮ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ. ಕವಿತಾ ಮಾತನಾಡಿ, ಶಿಬಿರಾರ್ಥಿಗಳು ಏಳು ದಿನಗಳ ಕಾಲ ಕ್ಷೇತ್ರದಲ್ಲಿದ್ದು, ಇಲ್ಲಿನ ಸೇವೆ ಮಾಡಲು ಅವಕಾಶ ಪಡೆದಿರುವುದು ಖುಷಿಯ ವಿಚಾರ. ಈ ಊರಿನ ಹಸಿರು ಮತ್ತು ಪ್ರಶಾಂತತೆ ನಿಜಕ್ಕೂ ಅದ್ಭುತ. ಒಂದೇ ಸ್ಥಳದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸವಿರುವುದು ಪರಸ್ಪರ ಹೊಂದಾಣಿಕೆಯೊಂದಿಗೆ ಬಾಳುವುದನ್ನು ಕಲಿಸುತ್ತದೆ. ಸೌಹಾರ್ದದಿಂದ ಬಾಳುವುದು ಇಂದಿನ ಸಮಾಜದಲ್ಲಿ ಮುಖ್ಯವಾದ ಕೌಶಲ್ಯ ಎಂದು ತಿಳಿಸಿದರು.

ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬೂದೇಶ್ವರ ಮಠದ ಕಾರ್ಯದರ್ಶಿ ಗುರುರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರು, ನಿಟ್ಟೂರು ಗ್ರಾಮದ ಎಸ್.ಕೆ. ರಘುನಾಥ್, ವೆಂಕಟೇಶ್, ಭರತ್, ನಾಯಕ್, ಚಂದ್ರಶೇಖರ್, ನಟರಾಜ್, ಮಹಿಳಾ ಕಾಲೇಜಿನ ವ್ಯವಸ್ಥಾಪಕ ಹರ್ಷ, ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.