ಕಾಡಾನೆ ಹಾವಳಿ ಆತಂಕದ ಮಧ್ಯೆಯೂ ನಾಟಿಗೆ ಸಿದ್ಧತೆ ಸಸಿಗಳನ್ನು ಬೆಳೆಸುತ್ತಿರುವ ರೈತರು | ಗರಿಗೆದರಿದ ಕೃಷಿ ಚಟುವಟಿಕೆ
ಆಲೂರು: ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ರೈತರು ಭೂಮಿ ಹದ ಮತ್ತು ಹಸನು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕೆಲ ರೈತರು ಈಗಾಗಲೇ ಬಿತ್ತನೆ ಮಾಡಿರುವ ಗದ್ದೆಯಲ್ಲಿ ಬೆಳೆದಿರುವ ಭತ್ತದ ಬೆಳೆಗೆ ಬರ ಹರತೆ ಹೊಡೆದು ಕಳೆ ತೆಗೆದಿದ್ದಾರೆ. ಜೂನ್-ಜುಲೈನಲ್ಲಿ ಮಳೆಯಾಗುವ ಸಂದರ್ಭದಲ್ಲಿ ಗದ್ದೆಗೆ ನೀರು ಸಂಗ್ರಹಿಸಿ, ನೀರು ಹರತೆ ಹೊಡೆದು, ಗದ್ದೆಯಿಂದ ಕನಿಷ್ಠ ಒಂದು ವಾರ ಅಥವಾ 15 ದಿನ ನೀರು ಹೊರ ಹೋಗದಂತೆ ತಡೆದು ನಿಲ್ಲಿಸುತ್ತಾರೆ.
ಈ ಅವಧಿಯಲ್ಲಿ ಹರತೆ ಸಂದರ್ಭದಲ್ಲಿ ಕಿತ್ತಿರುವ ಮಣ್ಣು ತಿಳಿಯಾಗಿ, ಭತ್ತದ ಸಸಿ ಮಡಿಲನ್ನು ಸೇರುತ್ತದೆ. ಇದರಿಂದ ಭತ್ತ ಹುಲುಸಾಗಿ ಬೆಳೆಯುತ್ತದೆ. ಮನೆಯಲ್ಲಿ ಕೃಷಿ ಮಾಡುವವರ ಜೊತೆ ಎತ್ತುಗಳಿದ್ದರೆ ಮಾತ್ರ ಇಂತಹ ಕೆಲಸವನ್ನು ಮಾಡಲು ಸಾಧ್ಯ ಎನ್ನುತ್ತಾರೆ ರೈತರು.
ನಾಟಿ ಮಾಡುವ ರೈತರು ಟ್ರ್ಯಾಕ್ಟರ್ ಬಳಸಿ ಗದ್ದೆಗಳನ್ನು ಉಳುಮೆ ಮಾಡಿ ನೀರು ಕಟ್ಟಿದ್ದಾರೆ. ಸಸಿ ಮಡಿಲನ್ನು ಮಾಡಿದ್ದಾರೆ. ಸಸಿ ಹುಟ್ಟಿದ 8-10 ದಿನಗಳೊಳಗೆ ನಾಟಿ ಮಾಡಲು ತಯಾರು ಮಾಡಿಕೊಂಡಿದ್ದಾರೆ. ಒಟ್ಟಾರೆ ಗದ್ದೆಯಲ್ಲಿ ಭತ್ತದ ಸಸಿ ನೆಡುವ ಸಂದರ್ಭದಲ್ಲಿ ತುಂತುರು ಮಳೆಯಾದರೆ ಉತ್ತಮ ಎನ್ನುತ್ತಾರೆ ರೈತರು.
ಭತ್ತ ನಾಟಿ ಕಾರ್ಯ ಮುಗಿದ ನಂತರ ದಿಢೀರನೆ ಬಿಸಿಲು ವಾತಾವರಣ ಸೃಷ್ಟಿಯಾಗಿ, 15 ದಿನಗಟ್ಟಲೆ ಮಳೆಯಾಗದಿದ್ದರೆ ನಾಟಿ ಮಾಡಿರುವ ಗದ್ದೆಗಳಿಗೆ ತೊಂದರೆಯಾಗಲಿದೆ.
ನಾಟಿ ಮಾಡಿದ ನಂತರ ಎಂಟು ದಿನಗಳಿಗೊಮ್ಮೆ ಗದ್ದೆಯಿಂದ ನೀರನ್ನು ಹೊರ ತೆಗೆದು ಪುನಃ ಒಂದೆರಡು ದಿನದ ನಂತರ ನೀರು ಹಾಯಿಸಿ ಸಂಗ್ರಹಿಸಬೇಕು. ಭತ್ತ ನಾಟಿ ಮಾಡಲು ಗದ್ದೆಯಲ್ಲಿ ಸದ್ಯಕ್ಕೆ ಕೆರೆ ಕಟ್ಟೆಗಳಲ್ಲಿ ನೀರಿದೆ. ನಾಟಿ ಕೆಲಸ ಪೂರ್ಣಗೊಳಿಸಲು ಅನುಮಾನವಿಲ್ಲ.
ಕೆರೆಗಳು ತುಂಬಿದ್ದು ಆಗಾಗ ಮಳೆಯಾದರೆ ಭತ್ತದ ಕೃಷಿ ಆಶಾದಾಯಕವಾಗುತ್ತದೆ. ತಾಂತ್ರಿಕ ಬಳಸಿದರೂ ಸಸಿ ನಾಟಿ ಮಾಡಲು ಮಹಿಳಾ ಕೃಷಿ ಕಾರ್ಮಿಕರ ಅಭಾವ ತೀವ್ರ ತಲೆದೋರಿದೆ.ಕೆ. ಎಚ್. ರಾಜೇಶ್ ಕಂದಾವರದ ಕೃಷಿಕ
ತಾಲ್ಲೂಕಿನಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈಗ ಮಳೆ ಆಗುತ್ತಿದ್ದು ನಾಟಿಗೆ ಉತ್ತಮ ಸಮಯ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಲಭ್ಯವಿದೆರಮೇಶ್ ಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.