ADVERTISEMENT

ಫಲಿತಾಂಶದ ಆತಂಕ, ಭಯ ಇಲ್ಲ: ನಿಖಿಲ್‌

ಹುಟ್ಟೂರಿನ ದೇವಾಲಯಗಳಿಗೆ ಸಿಎಂ ಕುಟುಂಬ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2019, 12:24 IST
Last Updated 22 ಮೇ 2019, 12:24 IST
   

ಹಾಸನ: ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಂತೆ ಮನೆ ದೇವರಾದ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ ಮತ್ತು ಹುಟ್ಟೂರು ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್‌ ಕುಮಾರಸ್ವಾಮಿ ಪೂಜೆ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ‘ಫಲಿತಾಂಶದ ಬಗ್ಗೆ ಯಾವುದೇ ಆತಂಕ, ಭಯ ಇಲ್ಲ. ಮಂಡ್ಯದ ಜನರು ಬೆಂಬಲಿಸುವುದು ನಿಶ್ಚಿತ. ನನ್ನ ಪರವಾಗಿ ಆರು ಮತ್ತು ನನ್ನ ಎದುರಾಳಿ ಪರವಾಗಿ ನಾಲ್ಕು ಸಮೀಕ್ಷೆಗಳ ವರದಿ ಬಂದಿವೆ. ನನ್ನ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಿತಾ ಕುಮಾರಸ್ವಾಮಿ ಮಾತನಾಡಿ, ‘ನಿಖಿಲ್ ಗೆಲ್ಲುವುದು ನೂರಕ್ಕೆ ನೂರು ಖಚಿತ‌. ಅಲ್ಲದೇ ಹಾಸನ, ತುಮಕೂರಿನಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ’ ಎಂದರು.

ADVERTISEMENT

‘ಫಲಿತಾಂಶ ಪ್ರಕಟಗೊಂಡ ನಂತರ ಸರ್ಕಾರ‌ ಬೀಳುತ್ತದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ. ಕುಮಾರಸ್ವಾಮಿ ‌ಮುಖ್ಯಮಂತ್ರಿಯಾಗಿ‌ ಐದು ವರ್ಷ ಪೂರ್ಣಗೊಳಿಸುತ್ತಾರೆ. ಮಾಧ್ಯಮದವರು ತಮಗೆ ಇಷ್ಟ ಬಂದಂತೆ ವರದಿ ಬಿತ್ತರಿಸುತ್ತಾರೆ. ಸ್ವಲ್ಪ‌ ಸಮಾಲೋಚಿಸಿ ಸುದ್ದಿ ಮಾಡಬೇಕು. ಯಡಿಯೂರಪ್ಪ ಸರ್ಕಾರ ಬೀಳಿಸುವುದಾಗಿ ಹಗಲು ಗನಸು ಕಾಣುತ್ತಿದ್ದಾರೆ. ಅವರ ಪ್ರಯತ್ನ ವ್ಯರ್ಥವಾಗಲಿದೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಯಾರು ಬೀಳಿಸಲು ಸಾಧ್ಯವಿಲ್ಲ’ ಎಂದು ವಿಶ್ವಾಸದಿಂದ ನುಡಿದರು.

ಇದಕ್ಕೂ ಮುನ್ನ ಹೆಲಿಕಾಪ್ಟರ್‌ನಲ್ಲಿ ಶೃಂಗೇರಿಗೆ ತೆರಳಿ ಶಾರದಾಂಬೆ ದರ್ಶನ ಪಡೆದು, ಗುರುಗಳ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.