
ಗಂಡಸಿ: ಸುಖ, ಶಾಂತಿ, ನೆಮ್ಮದಿಯ ಕುಟುಂಬ ಆಗಬೇಕಾದಲ್ಲಿ ಆ ಕುಟುಂಬದಲ್ಲಿ ಬಡತನ ಇದ್ದರೂ ಪರವಾಗಿಲ್ಲ, ಮದ್ಯವ್ಯಸನಿಗಳು ಇರಬಾರದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸುರೇಶ್ ಮೊಯ್ಲಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗಂಡಸಿ ದೊಡ್ಡಮ್ಮ ಚಿಕ್ಕಮ್ಮ ಸಮುದಾಯ ಭವನದಲ್ಲಿ ಗುರುವಾರ ನಡೆದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ವರ್ಷಗಳಿಂದ ಮದ್ಯವರ್ಜನ ಶಿಬಿರ ನಡೆಸುತ್ತಾ ಬಂದಿದ್ದು, ಗಂಡಸಿಯಲ್ಲಿ ನಡೆಸುತ್ತಿರುವ ಶಿಬಿರ 2000ನೇಯದ್ದಾಗಿದೆ. ಈ ಶಿಬಿರದಲ್ಲಿ ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡುವುದರ ಜೊತೆಗೆ ಮದ್ಯವ್ಯಸನಿಗಳನ್ನು ಶಿಬಿರಕ್ಕೆ ದಾಖಲಿಸಿಕೊಂಡು ಅವರೊಡನೆ ಸಮಾಲೋಚನೆ ನಡೆಸಿ ಮದ್ಯಪಾನ ಚಟ ಬಿಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಮಾಡಿಕೊಂಡು ನವ ಜೀವನ ನಡೆಸಲು ಸಂಸ್ಥೆ ಶಕ್ತಿಮೀರಿ ಶ್ರಮಿಸಲಿದೆ’ ಎಂದರು.
‘ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಜೀವನ ಮಟ್ಟ ಸುಧಾರಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದೆ. ಜೊತೆಗೆ ಗ್ರಾಮೀಣ ಪ್ರದೇಶದ ಕೆರೆಗಳ ಪುನರ್ ನಿರ್ಮಾಣ, ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಿ ಸಂರಕ್ಷಿಸುವ ಕಾರ್ಯ ಮಾಡುತ್ತಿದೆ’ ಎಂದರು.
ಮದ್ಯವರ್ಜನ ಶಿಬಿರದ ಅಧ್ಯಕ್ಷ ಜಿ.ಎ. ಕುಮಾರ್, ತಾಲ್ಲೂಕು ಯೋಜನಾಧಿಕಾರಿ ಅಕ್ಷತಾ ರೈ, ಸಮಿತಿಯ ಸದಸ್ಯರಾದ ವಿರೂಪಾಕ್ಷಪ್ಪ, ವೆಂಕಟೇಶಮೂರ್ತಿ, ಕೇಶವ ಪ್ರಸಾದ್, ಮಂಜುನಾಥ್, ಗಂಡಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಶಿಬಿರದ ಅಧಿಕಾರಿ ದಿನೇಶ್ ಮರಾಠಿ, ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.