ಆಲೂರು: ಸ್ಥಳೀಯ ಆಡಳಿತ ಮತ್ತು ಇಲಾಖೆಗಳು ರಸ್ತೆ ಸೇರಿದಂತೆ ಇತರೆ ಕಾಮಗಾರಿ ಪೂರ್ಣಗೊಳಿಸಿದ ನಂತರ ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸರಿಯಾದ ನಿರ್ವಹಣೆ ಇಲ್ಲವಾದರೆ ನಾನಾ ಅನಾಹುತಗಳಿಗೆ ಕಾರಣವಾಗುತ್ತದೆ. ರಸ್ತೆಗಳು ಗುಂಡಿ ಬಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಯಾರು ಜವಾಬ್ದಾರಿ ಎಂದು ಅವರು ಪ್ರಶ್ನಿಸಿದ್ದಾರೆ.
ರಸ್ತೆಗಳಲ್ಲಿ ಆಗುವ ಗುಂಡಿಗಳನ್ನು ಸಂಬಂಧಿಸಿದ ಇಲಾಖೆ ಗಮನಿಸಿ ಮುಚ್ಚಬೇಕು. ಇಲ್ಲವಾದರೆ ಅದೇ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಸಂದರ್ಭದಲ್ಲಿ ಗುಂಡಿಗಳು ಅಪಘಾತಗಳಿಗೆ ಕಾರಣವಾಗಲಿದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಒಳ ಪ್ರವೇಶ ಮಾಡುವ ಸ್ಥಳದಲ್ಲಿ ಸುಮಾರು ಮೂರು ಅಡಿ ಅಗಲದ ಗುಂಡಿ ಬಿದ್ದಿದೆ. ಈ ಗುಂಡಿ ಎರಡು ದಿನಗಳಲ್ಲಿ ಮೂರು ಅಡಿ ಅಗಲವಾಗಿ ಆರು ಇಂಚು ಆಳವಾಗಿದೆ. ಇದೇ ರೀತಿ ಅಲ್ಲಲ್ಲಿ ಗುಂಡಿಗಳಾಗಿವೆ. ಮಿನಿ ವಿಧಾನಸೌಧ ಕಚೇರಿ, ಪೊಲೀಸ್ ಠಾಣೆ, ತಾಲ್ಲೂಕು ಪಂಚಾಯಿತಿ, ಪಶುವೈದ್ಯ ಆಸ್ಪತ್ರೆ ಇದೆ ಸುತ್ತಳತೆಯಲ್ಲಿದೆ. ಪ್ರತಿದಿನ ಸಾವಿರಾರು ಸಾರಿಗೆ ಬಸ್ಗಳು, ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಮಳೆಗಾಲವಾಗಿರುವುದರಿಂದ ಗುಂಡಿಯಲ್ಲಿ ನೀರು ನಿಂತು, ವಾಹನಗಳು ಚಲಿಸುವಾಗ ಗುಂಡಿಯಲ್ಲಿನ ಕಲುಷಿತ ನೀರು ಪಾದಚಾರಿಗಳಿಗೆ ಸೀರಲಿದೆ. ವಾಹನ ಸವಾರರು ಅಪಘಾತಕ್ಕೀಡಾಗುವ ಮತ್ತು ವಾಹನ ಹದಗೆಡುತ್ತದೆ ಎಂದು ವಾಹನ ಸವಾರರು ಅಸಮಾಧಾನ ಹೊರಹಾಕಿದ್ದಾರೆ.
ಪ್ರತಿಯೊಂದು ರಸ್ತೆಯಲ್ಲಿರುವ ಇಂತಹ ಗುಂಡಿಗಳನ್ನು ಪ್ರಾರಂಭಿಕ ಹಂತದಲ್ಲಿ ಮುಚ್ಚಿದರೆ ರಸ್ತೆಗಳು, ವಾಹನಗಳು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡಬಹುದು ಎಂದು ಸಾರ್ವಜನಿಕರು ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.