ADVERTISEMENT

ಶಿಲ್ಪ ಕಲೆ ಶಾಲೆ ನಿರ್ಮಿಸಲು ಪ್ರಸ್ತಾವನೆ

ಜಾಗ ಗುರುತಿಸಲು ತಹಶೀಲ್ದಾರ್‌ಗೆ ನಿರ್ದೇಶನ; ಡಿ.ಸಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 13:55 IST
Last Updated 1 ಜನವರಿ 2021, 13:55 IST
ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹಾಗೂ ಗಣ್ಯರು ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹಾಗೂ ಗಣ್ಯರು ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.   

ಹಾಸನ: ವಿಶ್ವಕರ್ಮ ಸಮುದಾಯದ ಹಲವು ದಿನಗಳ ಬೇಡಿಕೆಯಂತೆ ಜಿಲ್ಲೆಯಲ್ಲಿ ಶಿಲ್ಪಕಲೆ ಶಾಲೆ ಆರಂಭಿಸಲು ಆಡಳಿತಾತ್ಮಕ ಪ್ರಕ್ರಿಯೆ ಮುಗಿದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹೇಳಿದರು.

ಹಾಸನ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದವತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಚಾರಿ ಜಯಂತಿಯಲ್ಲಿ ಮಾತನಾಡಿದ ಅವರು, ಶಾಲೆಗೆ ಸೂಕ್ತ ಸ್ಥಳ ಗುರುತಿಸಲು ತಹಶೀಲ್ದಾರ್‌ಗೆ ನಿರ್ದೇಶನ ನೀಡಲಾಗುವುದು ಎಂದರು.

ಅನೇಕ ವಿಶ್ವ ಪರಂಪರೆ ತಾಣಗಳು ಕರ್ನಾಟಕದಲ್ಲಿವೆ. ಅದರಲ್ಲಿ ಶಿಲ್ಪಕಲೆಗಳ ತವರೂರಾದ ಬೇಲೂರು ಮತ್ತು ಹಳೇಬೀಡು ಹೊಯ್ಸಳ ಶೈಲಿಯ ದೇವಾಲಯಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಅಂತಹ ಅದ್ಭುತವಾದ ಶಿಲ್ಪ ಕಲೆಯನ್ನು ಜಕಣಾಚಾರಿ ಕೊಟ್ಟಿದ್ದಾರೆ ಎಂದು ನುಡಿದರು.

ADVERTISEMENT

ರಾಜ್ಯದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕೆಂದರೆ ತಮಿಳುನಾಡಿನಿಂದ ಶಿಲ್ಪಿಗಳನ್ನು ಕರೆಸುವಂತಹ ಪರಿಸ್ಥಿತಿ ಇದೆ. ಸರ್ಕಾರ ಈಗಾಗಲೇ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಎಲ್ಲರೂ ನಿಗಮದಿಂದ ಸಿಗುವ ಸವಲತ್ತುಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಮಾತನಾಡಿ, ಅಂಬೇಡ್ಕರ್‌, ಬಸವಣ್ಣ, ಜಕಣಾಚಾರಿಅವರಂತ ಮಹನೀಯರನ್ನು ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತ ಮಾಡಬಾರದು. ಅವರ ಸಮಾಜದ ಹಾಗೂ ದೇಶದ ಆಸ್ತಿ. ವಿದೇಶದಲ್ಲಿ ಭಾರತದ ಪರಂಪರೆ ಕಲೆಗೆ ತುಂಬಾ ಬೆಲೆ ಇದೆ. ಇಲ್ಲಿನ ಶಿಲ್ಪ ಕಲೆಯನ್ನು ಅಲ್ಲಿ ಕದ್ದು ಮಾರಾಟ ಮಾಡುವ ಸನ್ನಿವೇಶಗಳು ಇದೆ ಎಂದರು.

ವಿಶ್ವಕರ್ಮ ಸಮಾಜದ ಮುಖಂಡ ತಿಮ್ಮಾಚಾರ್‌ ಮಾತನಾಡಿ, ಬೇಲೂರಿನ ಶಿಲ್ಪಕಲೆ ವೈಭವ ಕಾಣುತ್ತಿದ್ದೇವೆ ಎಂದರೆ ಅದಕ್ಕೆ ಅಮರ ಶಿಲ್ಪಿ ಜಕಣಾಚಾರಿ ಕಾರಣ. ಅವರ ಪ್ರತಿಯನ್ನು ಬೇಲೂರಿನ ಚನ್ನಕೇಶ ದೇವಾಲಯದ ಬಳಿ ನಿರ್ಮಿಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಸ್ವಾತಂತ್ರ‍್ಯ ಹೋರಾಟಗಾರ ಎಚ್‌.ಎಂ ಶಿವಣ್ಣ, ವಿಶ್ವಕರ್ಮ ಸಮಾಜದ ಮುಖಂಡರಾದ ಜಿ.ಕುಮಾರ್‌, ವಾಸುದೇವ್‌, ಜಗದೀಶ್‌, ಕೇಶವ ಪ್ರಸಾದ್‌, ರಾಘವಾಚಾರ್‌, ಲೋಕೇಶ್‌, ಎಚ್‌.ವಿ. ಕುಮಾರ್‌, ಶಿವಶಂಕರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.