ADVERTISEMENT

ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಸರ್ಕಾರಿ ಕಲಾ ಕಾಲೇಜಿನಲ್ಲಿ ಭ್ರಷ್ಟಾಚಾರ: ಆಮ್‌ ಆದ್ಮಿ ಪಾರ್ಟಿ ಆರೋ‍ಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 3:05 IST
Last Updated 22 ಡಿಸೆಂಬರ್ 2021, 3:05 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಹಾಸನ: ‘ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಜರುಗಿಸಬೇಕು’ ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಟಿ.ಆರ್. ಮಹೇಂದ್ರ ಕುಮಾರ್ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಬಡ ವಿದ್ಯಾರ್ಥಿಗಳಿಗೆ ನೀಡುವ ಸಮವಸ್ತ್ರ ಗಳಿಗೆ ₹ 350 ರ ಬದಲಾಗಿ ₹ 650 ಸಂಗ್ರಹಿಸಲಾಗಿದೆ. ₹ 1.50 ಕೋಟಿಗೂ ಹೆಚ್ಚು
ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿದರು.

‘ಕೋವಿಡ್‌ ಸಂಕಷ್ಟ ಸಂದರ್ಭ ದಲ್ಲಿ ಶಾಲಾ, ಕಾಲೇಜು ಸಂಪೂರ್ಣ ವಾಗಿ ಮುಚ್ಚಿರುವಾಗ, ಕಾಲೇಜಿಗೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ಖರೀದಿಸುವುದರಲ್ಲಿ, ನವೀಕರಣದ ಹೆಸರಿನಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮ, ವಾರ್ಷಿಕ ಸಂಚಿಕೆ, ಪಿ.ಜಿ ಡೆವಲಪ್‌ಮೆಂಟ್‌ ಹೆಸರಿನಲ್ಲಿ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ’ ಎಂದು ದೂರಿದರು.

ADVERTISEMENT

‘ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಶಿಕ್ಷಣದ ಹೆಸರಿನಲ್ಲಿ ಲೂಟಿ ಮಾಡಿರುವ ಮಹೇಂದ್ರ ಕುಮಾರ್ ಮತ್ತು ಕೆಲ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿ , ನ್ಯಾಯ ಸಮ್ಮತ ತನಿಖೆ ನಡೆಸಿ ತಪ್ಪಿತಸ್ಥರ
ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ. ಶಿವಕುಮಾರ್‌, ಸಂಘಟನಾ ಕಾರ್ಯದರ್ಶಿ ಕೆ.ಎಸ್.
ಶ್ರೀನಿವಾಸ್, ಮಹೇಶ್‌ ಇದ್ದರು.

ಮಾನನಷ್ಟ ಮೊಕದ್ದಮೆ ದಾಖಲು: ಮಹೇಂದ್ರ

‘ನನ್ನ ವಿರುದ್ದ ಆಪ್‌ ಆದ್ಮಿ ಪಕ್ಷ ಮಾಡಿರುವ ಆರೋಪ ಸುಳ್ಳು. ಕಾಲೇಜಿನ ಕಾಮಗಾರಿ ಅಥವಾ ಉಪಕರಣಗಳ ಖರೀದಿಗೆ ಯಾವುದೇ ಹಣ ನಮಗೆ ಬಿಡುಗಡೆ ಆಗುವುದಿಲ್ಲ. ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಹಣ ಸಂಗ್ರಹಿಸಿಲ್ಲ. ವಿದ್ಯಾರ್ಥಿಗಳೇ ಖಾಸಗಿ ವ್ಯಕ್ತಿಗಳ ಜೊತೆಗೆ ವ್ಯವಹರಿಸಿರಬಹುದು. ಎಲ್ಲವೂ ಎ.ಜೆ. ಆಡಿಟ್‌ ಆಗಿದ್ದು, ನನಗೆ ಪಿಂಚಣಿಯೂ ಸೆಟಲ್ ಆಗಿದೆ. ಶಿವಕುಮಾರ್‌ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ’

ಟಿ.ಆರ್‌ ಮಹೇಂದ್ರ ಕುಮಾರ್, ನಿವೃತ್ತ ಪ್ರಾಂಶುಪಾಲ, ಸರ್ಕಾರಿ ಕಲಾ, ವಾಣಿಜ್ಯ ಮತ್ತು
ಸ್ನಾತಕೋತ್ತರ ಕಾಲೇಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.