ಹಾಸನ: ನಗರವನ್ನು ಸುಂದರ ಮಾಡುವ ಬದಲು ಜನರಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಜೆಡಿಎಸ್ ಮುಖಂಡ ಪ್ರಸಾದ್ ಗೌಡ ಒತ್ತಾಯಿಸಿದರು.
ರಾಜ್ಯದ 223 ಶಾಸಕರೂ ಹಾಸನದತ್ತ ತಿರುಗಿ ನೋಡಬೇಕು ಎನ್ನುವ ರೀತಿಯಲ್ಲಿ ನಗರವನ್ನು ಅಂಧಗೊಳಿಸುವ ರೂಪುರೇಷೆ ಸಿದ್ಧವಾಗಿದೆ ಎಂದಿದ್ದಾರೆ. ಆದರೆ, 223 ಶಾಸಕರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸೇರಿದ್ದಾರೆ ಎಂಬ ಅರಿವು ಶಾಸಕರಿಗೆ ಇಲ್ಲ. ಮಾತನಾಡುವ ಮುನ್ನ ಎಚ್ಚರ ಇರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರೀತಂಗೌಡ ಶಾಸಕರಾದ ದಿನದಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲೂ ಕೊಡುಗೆ ನೀಡಿಲ್ಲ. ಟ್ಯಾಂಕರ್ ಮೂಲಕ ಕುಡಿಯುವ ನೀರು ಕೊಡುವ ಗಿಮಿಕ್ ನಿಲ್ಲಿಸಬೇಕು. ಅನೇಕ ಹಳ್ಳಿಗಳಲ್ಲಿ ಸ್ವಚ್ಛತೆ ಇಲ್ಲ. ಹಲವೆಡೆ ಶೌಚಾಲಯ ಇಲ್ಲ. ಈ ಬಗ್ಗೆ ಗಮನ ಹರಿಸಿ, ಆಮೇಲೆ ಸುಂದರ ನಗರ ಮಾಡಿ ಎಂದು ವ್ಯಂಗ್ಯವಾಡಿದರು.
ಕೆ.ಆರ್.ಪುರಂ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಆಸ್ಪತ್ರೆಗೆ ಅನುಮತಿ ನೀಡಬಾರದು. ಮನವಿಗೆ ನಗರಸಭೆ ಸ್ಪಂದಿಸಿದ್ದು, ಅದರಂತೆ ನಡೆಯಬೇಕು. ಇಲ್ಲವಾದರೆ ಮತ್ತೆ ಹೋರಾಟಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.