ADVERTISEMENT

ಹಾಸನ| ಕ್ಷುಲ್ಲಕ ಕಾರಣಕ್ಕೆ ಜಗಳ: ಸ್ನೇಹಿತನ ಕೊಲೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 4:47 IST
Last Updated 21 ಅಕ್ಟೋಬರ್ 2020, 4:47 IST

ಹಾಸನ: ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ಒಬ್ಬನ ಹತ್ಯೆಯಲ್ಲಿ ಅಂತ್ಯವಾಗಿದೆ.

ನಗರದ ಹೊರವಲಯದ ನಾರಿಹಳ್ಳಿಯ ಗವಿಗೌಡ (23) ಹತ್ಯೆಯಾದ ಯುವಕ. ಆಂದ್ರಪ್ರದೇಶದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಗವಿಗೌಡ ಲಾಕ್‍ಡೌನ್ ಬಳಿಕ ಊರಿಗೆ ವಾಪಸ್‌ ಆಗಿ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಪಕ್ಕದ ಎಚ್.ಡಿ. ದೇವೇಗೌಡ ನಗರದ ಸ್ನೇಹಿತ ಕೃಷ್ಣ ಎಂಬಾತ ಕೆಲಸದ ನಿಮಿತ್ತ ಸೋಮವಾರ ಮಧ್ಯಾಹ್ನ ಗವಿಗೌಡನ ಬೈಕ್ ಪಡೆದು ಹೋಗಿದ್ದ. ಕೆಲಸ ಮುಗಿಸಿ ಸಂಜೆ ಬೈಕ್ ಹಿಂತಿರುಗಿಸಿದ ವೇಳೆ ಬೈಕ್‍ನ ಕೆಲ ಭಾಗ ಸಣ್ಣ ಪುಟ್ಟ ಹಾನಿಯಾಗಿತ್ತು. ಬೈಕ್ ರಿಪೇರಿ ಮಾಡಿಸಿ ಕೊಡುವಂತೆ ಪಟ್ಟು ಹಿಡಿದ, ಇದಕ್ಕೆ ಗವಿಗೌಡ ಒಪ್ಪಲಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯಿತು.

ಸೋಮವಾರ ರಾತ್ರಿ ಮತ್ತೆ ಕೃಷ್ಣನ ಮನೆಯ ಬಳಿ ಹೋಗಿ ಬೈಕ್ ರಿಪೇರಿ ಮಾಡಿಸಿ ಕೊಡುವಂತೆ ಜಗಳ ತೆಗೆದಿದ್ದಾನೆ. ಕುಡಿದ ಮತ್ತಿನಲ್ಲಿ ಮನೆಯೊಳಗಿದ್ದ ಚಾಕು ತಂದು ಗವಿಗೌಡನ ಎದೆ ಭಾಗಕ್ಕೆ ಇರಿದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆ ಬಳಿಕ ಕೃಷ್ಣನಿಗೆ
ಸ್ಥಳೀಯರು ಥಳಿಸಿದ ಪರಿಣಾಮ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.