
ನುಗ್ಗೇಹಳ್ಳಿ: ರಾಗಿ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಗಿ ಬೆಳೆಗೆ ಹೆಚ್ಚಿನ ಬೆಂಬಲ ಬೆಲೆ ನೀಡುತ್ತಿರುವ ಹಿನ್ನೆಲೆಯಲ್ಲಿ ರೈತರು ರಾಗಿ ಬೆಳೆಯನ್ನು ವಾಣಿಜ್ಯ ಬೆಳೆಯನ್ನಾಗಿ ಕೃಷಿಯಲ್ಲಿ ಅನುಸರಿಸುತ್ತಿದ್ದು ಹೆಚ್ಚು ರಾಗಿ ಬೆಳೆಯುವತ್ತ ಮುಖ ಮಾಡಿದ್ದಾರೆ ಎಂದು ಹೋಬಳಿ ಕೃಷಿ ಅಧಿಕಾರಿ ಜಿ.ವಿ. ದಿನೇಶ್ ಹೇಳಿದರು.
ಹೋಬಳಿಯ ಸಮುದ್ರವಹಳ್ಳಿ ಗ್ರಾಮದ ಪ್ರಗತಿಪರ ರೈತ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಎಸ್. ರಾಮಚಂದ್ರು ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕೆಎಂಆರ್ 630 ರಾಗಿ ತಳಿ ಬೆಳೆಯನ್ನು ವೀಕ್ಷಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ಕ್ವಿಂಟಲ್ಗೆ ₹4896 ನಿಗದಿ ಮಾಡಿ ರೈತರಿಂದ ರಾಗಿ ಖರೀದಿಸುತ್ತಿದ್ದಾರೆ. ಇದರಿಂದ ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ವರ್ಷ ಹೋಬಳಿ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ರಾಗಿ ಬೆಳೆಯನ್ನು ರೈತರು ವಾಣಿಜ್ಯ ಬೆಳೆಯನ್ನಾಗಿ ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ರಾಗಿ ಬೆಳೆಯಲು ಒತ್ತು ನೀಡುತ್ತಿದ್ದಾರೆ ಎಂದರು.
ಪ್ರಗತಿಪರ ರೈತನ ಸಾಧನೆ: ಹೋಬಳಿಯ ವ್ಯಾಪ್ತಿಯ ಪ್ರಗತಿಪರ ರೈತರಾದ ರಾಮಚಂದ್ರು ತಮ್ಮ 2 ಎಕರೆ ಜಮೀನಿನಲ್ಲಿ ಹೋಬಳಿ ಕೃಷಿ ಇಲಾಖೆ ವತಿಯಿಂದ ಪಡೆದಿದ್ದ ಕೆಎಂಆರ್ 630 ಮೂರು ತಿಂಗಳ ರಾಗಿ ತಳಿಯಿಂದ ಪ್ರತಿ ಎಕರೆಗೆ 16 ರಿಂದ 18 ಕ್ವಿಂಟಲ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ಇಲಾಖೆಯ ಪ್ರಕಾರ ಪ್ರಸ್ತುತ 10 ರಿಂದ 12 ಕ್ವಿಂಟಲ್ ಬೆಳೆಯಬಹುದು ಆದರೆ ರೈತ ರಾಮಚಂದ್ರರವರು ವಿಶೇಷ ಆಸಕ್ತಿ ವಹಿಸುವ ಮೂಲಕ ಜಮೀನಿನಲ್ಲಿ ಸ್ವಲ್ಪವು ಕಳೆಯಿಲ್ಲದೆ ರಾಗಿ ಬೆಳೆಯನ್ನು ಬೆಳೆದಿರುವುದು ಹೆಚ್ಚು ಇಳುವರಿ ಬರುವ ಸಾಧ್ಯತೆ ಇದೆ. ಈ ವ್ಯವಸಾಯ ಮಾದರಿಯನ್ನು ಅನುಸರಿಸುವಂತೆ ರೈತರಿಗೆ ಸಲಹೆ ನೀಡಿದರು.
ಪ್ರಗತಿಪರ ರೈತ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ರಾಮಚಂದ್ರು ಮಾತನಾಡಿ, ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ಪಡೆದು ನಮ್ಮ ಎರಡು ಎಕರೆ ಜಮೀನಿನಲ್ಲಿ ನಾಟಿ ಮಾಡಲಾಗಿತ್ತು. ಅಧಿಕಾರಿಗಳ ಸಲಹೆ ಸೂಚನೆಯಂತೆ ಯೂರಿಯಾ ಹಾಗೂ ಗೊಬ್ಬರವನ್ನು ಬಳಸಲಾಗಿತ್ತು ಎಂದರು.
ಎರಡು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು ಸುಮಾರು ₹10 ರಿಂದ ₹13 ಲಕ್ಷದ ವರೆಗೆ ಶುಂಠಿ ಬೆಳೆಯಿಂದ ಲಾಭ ಬರಬಹುದೆಂದು ತೋಟಗಾರಿಕಾ ಹೋಬಳಿ ಅಧಿಕಾರಿ ಕಿರಣ್ ಅವರು ಶುಂಠಿ ಬೆಳೆ ವೀಕ್ಷಿಸಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಾದ ವಿಜಯಕುಮಾರ್, ರೈತ ಎಳನೀರು ಉಮೇಶ್, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.