ಹಾಸನ: ಅಂತರ್ಜಲಮಟ್ಟ ವೃದ್ಧಿ ಮತ್ತು ನೀರಿನ ಮರುಪೂರಣ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ, ಹಾಸನ ಜಿಲ್ಲೆ ದೇಶಕ್ಕೇ ಪ್ರಥಮ ಸ್ಥಾನ ಪಡೆದಿದೆ.
ಈ ಕುರಿತು ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆ ಜುಲೈ 29ರಂದು ಪಟ್ಟಿ ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ಹಾಸನದ ನಂತರ, ಬಳ್ಳಾರಿ ಜಿಲ್ಲೆ 2ನೇ ಸ್ಥಾನ ಪಡೆದಿದ್ದರೆ, ವಿಜಯಪುರ 3, ಚಿತ್ರದುರ್ಗ 4, ಗದಗ 6, ದಾವಣಗೆರೆ 7, ಬೆಳಗಾವಿ 12, ಕೊಪ್ಪಳ 14 ಮತ್ತು ರಾಮನಗರ 15 ನೇ ಸ್ಥಾನ ಪಡೆದಿವೆ.
ಅಭಿಯಾನದಲ್ಲಿ ಈವರೆಗೆ ಆಗಿರುವ ಪ್ರಗತಿ, ಜನರ ಸಹಭಾಗಿತ್ವ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಅದರಂತೆ ಹಾಸನ ಒಟ್ಟು 17.52 ಅಂಕ ಪಡೆದು ಮೊದಲ ಸ್ಥಾನ ಪಡೆದಿದೆ.
ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಅಧಿಕಾರಿಗಳು ಜಲಶಕ್ತಿ ಅಭಿಯಾನ ಸಂಬಂಧ ನಿತ್ಯವೂ ನಗರ ಹಾಗೂ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಿದ್ದು, ಈಗಲೂ ಮುಂದುವರಿದಿವೆ.
ಮುಖ್ಯವಾಗಿ ಚನ್ನರಾಯಪಟ್ಟಣ, ಅರಸೀಕೆರೆ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಅದನ್ನು ಹೆಚ್ಚಳ ಮಾಡುವ ಸಂಬಂಧ ಹಲವು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.