
ಹಿರೀಸಾವೆ: ಹೋಬಳಿ ಬೂಕನಬೆಟ್ಟದ ರಂಗನಾಥಸ್ವಾಮಿ ಈ ವರ್ಷದ ರಾಸು ಜಾತ್ರೆಗೆ, ಸುಮಾರು 500ಕ್ಕೂ ಹೆಚ್ಚು ಎತ್ತುಗಳು ಜಾತ್ರಾ ಆವರಣದಲ್ಲಿ ಸೇರಿದ್ದು, ಎರಡು ದಿನ ಮುಂಚಿತವಾಗಿ ಜಾತ್ರೆ ಪ್ರಾರಂಭವಾಗಿದೆ.
ಚನ್ನರಾಯಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ, ತುರುವೇಕೆರೆ ಸೇರಿದಂತೆ ಹಲವು ತಾಲ್ಲೂಕುಗಳಿಂದ ಕೆಲವು ರೈತರು ಮೇವು ತುಂಬಿಕೊಂಡು ಗಾಡಿ ಅಥವಾ ವಾಹನದಲ್ಲಿ ತಮ್ಮ ರಾಸುಗಳೊಂದಿಗೆ ಮಂಗಳವಾರ ಬೆಳಿಗ್ಗೆ ಜಾತ್ರೆಗೆ ಬಂದಿದ್ದು, ನಿಗದಿಪಡಿಸಿಕೊಂಡಿರುವ ಸ್ಥಳದಲ್ಲಿ ನೆಲೆಯೂರಿದ್ದಾರೆ.
ನಿಗದಿತ ದಿನಕ್ಕಿಂತ ಮೊದಲೇ ಬರುವ ಎತ್ತುಗಳನ್ನು ಜಾತ್ರೆ ಆವರಣಕ್ಕೆ ಬಿಡುವುದಿಲ್ಲ ಎಂದು ಆಡಳಿತ ವ್ಯವಸ್ಥೆ ಹೇಳಿದ್ದು, ಮಂಗಳವಾರ ಕೆಲವು ರೈತರು ಮಾತ್ರ ಬಂದಿದ್ದಾರೆ. ಬಹುತೇಕ ಉತ್ತಮ ಎತ್ತುಗಳ ಮೆರವಣಿಗೆ ಬುಧವಾರ ಮತ್ತು ಗುರುವಾರ ನಡೆಯಲಿದೆ. ಇನ್ನೂ ಹೆಚ್ಚಿನ ಎತ್ತುಗಳು ಬರುವ ಮೂಲಕ ಮುಂದಿನ ಎರಡು ದಿನದಲ್ಲಿ ಹಳ್ಳಿಕಾರ್ ತಳಿಯ ಜಾನುವಾರುಗಳಿಂದ ಜಾತ್ರೆ ಮೈದಾನ ತುಂಬುತ್ತದೆ.ಬೊಮ್ಮೆನಹಳ್ಳಿ, ಕೊತ್ತನಹಳ್ಳಿ, ಜನಿವಾರ, ಮತಿಘಟ್ಟ, ಎಂ.ಹೊಸೂರು, ಗೌಡರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತ್ತು ಅಕ್ಕಪಕ್ಕದ ತಾಲ್ಲೂಕಿನ ಹಳ್ಳಿಗಳ ರೈತರು ಹೆಚ್ಚಿನ ಬೆಲೆಯ ಎತ್ತುಗಳ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿದ್ದಾರೆ. ಚುಂಚನಕಟ್ಟೆ ಸೇರಿದಂತೆ ಇತರೆ ಜಾತ್ರೆಯಿಂದ ಎತ್ತುಗಳು ಈ ಜಾತ್ರೆಗೆ ಬರುವ ನಿರೀಕ್ಷೆ ಇದೆ. ಗುರುವಾರದಿಂದ ವ್ಯಾಪಾರ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಜಾತ್ರೆಯಲ್ಲಿರುವ ರೈತರು.
‘ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಎತ್ತುಗಳು ಜಾತ್ರೆಗೆ ಬರುತ್ತವೆ. ರೈತರು ತಮ್ಮ ಎತ್ತುಗಳನ್ನು ಕಟ್ಟಲು ಜಾತ್ರೆ ಆವರಣದ ತುಂಬ ದಾವಣಿಗಳನ್ನು ಸಿದ್ಧಪಡಿಸಿದ್ದಾರೆ’ ಎಂದು ಹೆಗ್ಗಡಿಹಳ್ಳಿ ಕೃಷ್ಣಮೂರ್ತಿ ಹೇಳಿದರು.
ಜಾತ್ರೆ ಆವರಣದಲ್ಲಿ ಸಿಹಿ, ಖರ್ಜೂರದ ಸೇರಿದಂತೆ ಇತರೆ ಅಂಗಡಿಗಳು, ಹೋಟೆಲ್ಗಳು ವ್ಯಾಪಾರ ಪ್ರಾರಂಭಿಸಿವೆ. ಜಾನುವಾರು ಪ್ರಿಯರು ಈಗಾಗಲೇ ಎತ್ತುಗಳನ್ನು ನೋಡಲು ಜಾತ್ರೆಗೆ ಬಂದು ಹೋಗುತ್ತಿದ್ದಾರೆ. ಜಾತ್ರೆಗೆ ಬರುವ ರೈತರಿಗಾಗಿ ಶನಿವಾರ ತಾಲ್ಲೂಕು ಆಡಳಿತ ಕೃಷಿ ಮೇಳ ಆಯೋಜನೆ ಮಾಡಿದೆ.
ಉಳುಮೆಗೆ ಮತ್ತು ಸಂತೋಷಕ್ಕೆ ಸಾಕುವ ಎತ್ತುಗಳು ಈ ಜಾತ್ರೆಗೆ ಬರುತ್ತಿವೆ. ಕಡಿಮೆ ಎಂದರೆ ₹50 ಸಾವಿರದಿಂದ ₹ 10 ಲಕ್ಷ ಬೆಲೆಬಾಳುವ ರಾಸುಗಳು ಜಾತ್ರೆಗೆ ಸೇರುತ್ತವೆಅಮಾಸೇಗೌಡ ತುರುವೇಕೆರೆ ತಾಲ್ಲೂಕು ದೊಡ್ಡ ಬೆಂಕಿನಕೆರೆ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.