
ಹಿರೀಸಾವೆ: ಎರಡು ಪ್ರಕರಣದಲ್ಲಿ ಜಾಮೀನು ಪಡೆದು ಮಂಗಳವಾರ ಸಂಜೆ ಜಿಲ್ಲೆಗೆ ಬಂದ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಹೋಬಳಿಯ ಕಿರೀಸಾವೆ ಗಡಿಯಲ್ಲಿ ಕಾರ್ಯಕರ್ತರು ಸ್ವಾಗತಿಸಿದರು.
ಬೆಳಿಗ್ಗೆ 11 ಗಂಟೆಗೆ ಜಿಲ್ಲೆಗೆ ಬರುತ್ತಾರೆ ಎಂಬ ಮಾಹಿತಿ ಇದ್ದುದ್ದರಿಂದ ಎಸ್ಪಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಬಂದ ರೇವಣ್ಣ ಅವರನ್ನು ಜೆಡಿಎಸ್ ಮುಖಂಡರಾದ ಎಚ್.ಜಿ. ರಾಮಕೃಷ್ಣ, ಜಯಂತ್, ಸಿಗೇಕೊಪ್ಪಲು ರಾಮೇಗೌಡ ಹೊನ್ನಶೆಟ್ಟಿಹಳ್ಳಿ ಮಂಜೇಗೌಡ, ಆಯರಹಳ್ಳಿ ಪ್ರಭಾಕರ್ ಸೇರಿದಂತೆ ಹೋಬಳಿಯ ಹಲವು ನಾಯಕರು ಹಾರ ಹಾಕಿ ಸ್ವಾಗತಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಜೆಡಿಎಸ್ ನಾಯಕರು, ಕಾರ್ಯಕರ್ತರು ಗಡಿಗೆ ಬಂದು, ಜೈಕಾರ ಕೂಗಿದರು. ಕೆಲವು ಕಾರ್ಯಕರ್ತರು ರೇವಣ್ಣನ ಕಾಲಿಗೆ ಬಿದ್ದರು. ನಂತರ ಅವರ ಕಾರನ್ನು ಹಿಂಬಾಲಿಸಿದರು. ಪೊಲೀಸ್ ಬೆಂಗಾವಲಿನಲ್ಲಿ ರೇವಣ್ಣ ಇಲ್ಲಿಂದ ತೆರೆಳಿದರು.
ಬಿಗಿ ಬಂದೋಬಸ್ತ್; ಗಡಿಯಲ್ಲಿ ರೇವಣ್ಣ ಅವರನ್ನು ಸ್ವಾಗತಿಸಲು ನೂರಾರು ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಸೇರುತ್ತಾರೆ. ನೂಕುನುಗ್ಗಲು ಉಂಟಾಗುತ್ತದೆ ಎಂದು ಬೆಳಿಗ್ಗೆಯಿಂದಲೇ 60ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಸ್ಥಳಕ್ಕೆ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜಿತಾ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದರು. ಸಕಲೇಶಪುರ ಡಿವೈಎಸ್ಪಿ ಪ್ರಮೋದ್ಕುಮಾರ್, ಹಿರೀಸಾವೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್, ಸಬ್ ಇನ್ಸ್ಪೆಕ್ಟರ್ ಸುಪ್ರಿತ್ ಸೇರಿದಂತೆ ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಠಾಣೆಗಳ ಸಬ್ ಇನ್ಸ್ಪೆಕ್ಟರ್ಗಳು, ಸಿಬ್ಬಂದಿ ಮತ್ತು ಕೆಎಸ್ಆರ್ಪಿ, ಡಿಎಆರ್ ಪೊಲೀಸರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.