ನುಗ್ಗೇಹಳ್ಳಿ: ನುಗ್ಗೇಹಳ್ಳಿ ಏತನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಗಸರಕಟ್ಟೆ ಬಳಿ ನೀರು ಹರಿಯುವ ಸೇತುವೆ ಕುಸಿದ ಪರಿಣಾಮ ಪೈಪ್ ಸಂಪೂರ್ಣ ಹಾನಿಯಾಗಿರುವ ಬಗ್ಗೆ ಪ್ರಜಾವಾಣಿಯಲ್ಲಿ ಮೇ 4ರಂದು ‘ಕಾಮಗಾರಿ ಕಳಪೆ: ರೈತರ ಆಕ್ರೋಶ’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ವರದಿಯಿಂದ ಎಚ್ಚೆತ್ತ ಹೇಮಾವತಿ ಜಲಾನಯನ ವಿಭಾಗದ ಅಧಿಕಾರಿಗಳು ಈ ಕಾಮಗಾರಿ ನಡೆಸಿದ ಶ್ರೀನಿವಾಸ ಕನ್ಸ್ಟ್ರಕ್ಷನ್ ಅವರಿಗೆ ದುರಸ್ತಿ ನಡೆಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಶನಿವಾರ ಸುಮಾರು 4 ಎ3 ಪೈಪು ಹಾಗೂ ಹಿಟಾಚಿ ಯಂತ್ರದ ಮೂಲಕ ಪೈಪ್ ಅಳವಡಿಸಲಾಗುತ್ತಿದೆ. ಸುಮಾರು ₹ 5 ಲಕ್ಷ ವೆಚ್ಚವಾಗಲಿದೆ ಗುತ್ತಿಗೆದಾರರು ತಿಳಿಸಿದರು.
ಮೇ 25ರಂದು ನುಗ್ಗೇಹಳ್ಳಿ ಹಿರೇಕೆರೆಗೆ ನೀರು ಬಿಡುವ ಹಿನ್ನೆಲೆಯಲ್ಲಿ ಶನಿವಾರ ತುರ್ತಾಗಿ ಕಾಮಗಾರಿ ಕೈಗೊಂಡು ಪೈಪ್ ಅಳವಡಿಸಲಾಗುತ್ತಿದೆ. ನುಗ್ಗೇಹಳ್ಳಿ ಗ್ರಾಮಸ್ಥರು ಹಾಗೂ ರೈತರು ಕಾಮಗಾರಿ ಆರಂಭಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಾಗೂರು ಹೇಮಾವತಿ ವಿಭಾಗದ ಸಹಾಯಕ ಎಂಜಿನಿಯರ್ ವಿ.ಪುನೀತ್, ‘ಪ್ರಜಾವಾಣಿಯಲ್ಲಿ ಕಾಮಗಾರಿ ಕಳಪೆ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸರಿಪಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿತ್ತು. ಆದರೆ, ಲಾಕ್ಡೌನ್ ಸಮಸ್ಯೆಯಿಂದ ಸ್ವಲ್ಪ ವಿಳಂಬವಾಗಿತ್ತು. ಆದರೆ ತುರ್ತಾಗಿ ಕಾಮಗಾರಿಪೂರ್ಣಗೊಳಿಸಲಾಗುತ್ತದೆ. ಸೋಮವಾರದಿಂದ ನುಗ್ಗೇಹಳ್ಳಿ ಕೆರೆಗೆ ನೀರು ಬಿಡಲಾಗುತ್ತದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.