ಶ್ರವಣಬೆಳಗೊಳ: ಇಲ್ಲಿಯ ನಾಗಮಂಗಲ ಮೈಸೂರು ರಸ್ತೆಯ ವಾರದ ಸಂತೆ ನಡೆಯುವ ಜಾಗಕ್ಕೆ ಹೊಂದಿಕೊಂಡಂತಿರುವ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ನೂತನ ವಾಣಿಜ್ಯ ಮಳಿಗೆಗಳು ಕಾಣದಂತೆ ಬೆಳೆದಿದ್ದ ಗಿಡಗಂಟಿಗಳನ್ನು ಸಂಪೂರ್ಣ ತೆರವುಗೊಳಿಸಿ, ಆವರಣ ಸ್ವಚ್ಛಗೊಳಿಸಿ ಮಳಿಗೆಗಳನ್ನು ಹರಾಜಿಗೆ ಸಿದ್ಧಗೊಳಿಸಲಾಗಿದೆ.
ಉದ್ಘಾಟನೆಯಾಗಿ ನಾಲ್ಕು ವರ್ಷ ಕಳೆದರೂ ಹರಾಜು ನಡೆದಿಲ್ಲ. ಪಂಚಾಯಿತಿ ಆದಾಯಕ್ಕೆ ಖೋತಾ ಆಗಿದೆ. ಸಂಕೀರ್ಣ ಪಾಳುಬಿದ್ದಿದೆ ಎಂದು ‘ಪ್ರಜಾವಾಣಿ’ಯು ಕಳೆದ ಮಾರ್ಚ್ 11ರ ಸಂಚಿಕೆಯಲ್ಲಿ ವಿವರವಾದ ವರದಿ ಪ್ರಕಟಿಸಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ‘ಯು ಆಕಾರದಲ್ಲಿ ನಿರ್ಮಿಸಿರುವ ಪಂಚಾಯಿತಿಯ 12 ವಾಣಿಜ್ಯ ಮಳಿಗೆಗಳ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಆವರಣ ಸ್ವಚ್ಛಗೊಳಿಸಲಾಗಿದೆ. 12 ರೋಲಿಂಗ್ ಶಟರ್ಗಳು 4 ವರ್ಷಗಳಿಂದ ಬಳಕೆಯಾಗದೆ ಹಾಳಾಗಿವೆ. ನೂತನ ಶಟರ್ ಅಳವಡಿಸಲಾಗುವುದು’ ಎಂದು ತಿಳಿಸಿದರು.
12 ಮಳಿಗೆಗಳ ಒಳ ಭಾಗದಲ್ಲಿ ಸ್ವಚ್ಛಗೊಳಿಸಿದ್ದು, ಇದೀಗ ಸಂಕೀರ್ಣಕ್ಕೆ ಬಣ್ಣವನ್ನೂ ಬಳಿಯಲಾಗಿದೆ. ಎಲ್ಲ ಮಳಿಗೆಗಳಿಗೂ ಪ್ರತ್ಯೇಕ ವಿದ್ಯುತ್ ಮೀಟರ್ಗಳನ್ನು ಅಳವಡಿಸಿದ ನಂತರ ಸಾರ್ವಜನಿಕರ ಉಪಯೋಗಕ್ಕೆ ಕೊಡಲಾಗುತ್ತಿದ್ದು, ಶೀಘ್ರವೇ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.