ಹೊಳೆನರಸೀಪುರ: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಬೀಳುತ್ತಿದ್ದು ಕವರ್ಡಕ್ ಮೇಲಿನ ತರಕಾರಿ ಮಾರುಕಟ್ಟೆ ಸಂಪೂರ್ಣ ರಾಡಿ ತುಂಬಿ ಕೆಸರು ಗದ್ದೆಯಂತಾಗಿದೆ.
ರಾಡಿಮಯ ವಾತಾವರಣದಿಂದ ಇಲ್ಲಿನ ಅಂಗಡಿಯವರಿಗೆ ಮತ್ತು ಖರೀದಿಗೆ ಬರುವಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಕೆಲವು ತಿಂಗಳ ಹಿಂದೆ ಕವರ್ಡಕ್ ಮೇಲಿನ ಮಾರುಕಟ್ಟೆ ಒಳಗೆ ಹೊಸದಾಗಿ ಡಾಂಬರು ಹಾಕಲಾಗಿತ್ತು. ಡಾಂಬರು ಕೆಲವೇ ದಿನಕ್ಕೆ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲು ರಸ್ತೆ ಅಗೆದರು. ಪೈಪ್ ಅಳವಡಿಸಿದ ನಂತರ ಗುಂಡಿಯನ್ನು ಸರಿಯಾಗಿ ಮುಚ್ಚದೆ ಬಿಟ್ಟಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆ.
‘ರಸ್ತೆ ಹದಗಟ್ಟೆ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿದ್ದಾಗ ಹೊಸ ಡಾಂಬರು ರಸ್ತೆಯನ್ನು ಅಗೆದ ಗುತ್ತಿಗೆದಾರನಿಂದ ಡಾಂಬರು ಹಾಕಿಸುವುದಾಗಿ ಹೇಳಿದ್ದ ಪುರಸಭೆ ಮುಖ್ಯಾಧಿಕಾರಿ ಶಾಂತಲಾ ಅವರು ಇನ್ನೂ ಕೆಲಸ ಮಾಡಿಸಿಲ್ಲ’ ಎಂದು ಸಾರ್ವಜನಿಕರು ದೂರಿದ್ದಾರೆ.
‘ಈ ಬಗ್ಗೆ ಪುರಸಭೆ ಗಮನಹರಿಸಿ ಅವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಹಾಗೂ ಅಂಗಡಿಯವರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.