ಹಾಸನ: ಶ್ರವಣಬೆಳಗೊಳದಲ್ಲಿ ನಡೆದ 2006ರ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಗಾಯಕ
ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ತಮ್ಮ ಬಳಗದಿಂದ ಸುಮಾರು ಒಂದೂವರೆ ತಾಸು ನೀಡಿದ್ದ ಕಾರ್ಯಕ್ರಮಕ್ಕೆ ಪ್ರೇಕ್ಷಕರು ತಲೆತೂಗಿದ್ದರು. ಜೈನ
ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಬಾಲಸುಬ್ರಹ್ಮಣ್ಯಂ ಅವರಿಗೆ ಬೆಳ್ಳಿಯ
ಬಾಹುಬಲಿ ಮೂರ್ತಿ ನೀಡಿ ಗೌರವಿಸಿದ್ದರು.
2008 ಮತ್ತು 2009ರಲ್ಲಿ ಹಾಸನದ ಕಲಾಭವನದಲ್ಲಿ ನಡೆದ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಸಂಗೀತ ಸುಧೆ ಹರಿಸಿದ್ದರು.
‘ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಎಸ್ಪಿಬಿ ಕಾರ್ಯಕ್ರಮ
ನೀಡಬೇಕೆನ್ನುಷ್ಟರಲ್ಲಿ ತಬಲಾ ವೇಣು ಅವರು ಶೃತಿ ಇಳಿದಿರುವುದನ್ನು ಗಮನಕ್ಕೆ ತಂದರು. ತಬಲಾ ಶೃತಿ ಸರಿ
ಹೋಗುವವರೆಗೂ 10 ರಿಂದ 15 ನಿಮಿಷ ಶಾಂತ ರೀತಿಯಲ್ಲಿ ವೇದಿಕೆ ಮೇಲೆ ಹಾಕಿದ್ದ ಸೋಫಾದಲ್ಲಿ ಕುಳಿತು,
ಶೃತಿ ಸರಿಯಾದ ಬಳಿಕ ಒಂದೂವರೆ ತಾಸು ಹಲವು ಜನಪ್ರಿಯ ಸಿನಿಮಾಗಳ ಗೀತೆಗಳನ್ನು ಹಾಡಿ ರಂಜಿಸಿದರು.
‘ಓಂ ಣಮೋ ಅರಹಂತಾಣಂ | ಣಮೋ ಸಿದ್ಧಾಣಂ | ಣಮೋ ಆಇರಿಯಾಣಂ | ಣಮೋ ಉವಜ್ಝಾಯಾಣಂ |
ಣಮೋ ಲೋಏ ಸವ್ವ ಸಾಹೂಣಂ ||’ಎಂಬ ಜೈನ ಧರ್ಮದ ಣಮೋಕಾರ ಮಂತ್ರದೊಂದಿಗೆ ಗಾಯನ
ಪ್ರಾರಂಭಿಸುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮೊಳಗಿದವು’ ಎಂದು ಶ್ರವಣಬೆಳಗೊಳದ ಗಾಯಕ ಸರ್ವೇಶ್ ಜೈನ್ ಹೇಳಿದರು.
‘ಆ ಕಾರ್ಯಕ್ರಮದಲ್ಲಿ ಎಸ್ಪಿಬಿ ಅವರು 12 ಹಾಡುಗಳನ್ನು ಹಾಡಿದರು. ಜೊತೆಯಲಿ.. ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು.., ಚಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ ಗೀತೆ ಹಾಡಿ ರಂಜಿಸಿದರು. ಹಾಡು
ಸಂತೋಷಕ್ಕೆ.., ಹಾಡು ಎಂಬ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು. ಸಹ ಗಾಯಕರ
ಹಾಡುಗಳನ್ನು ಆಲಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು’ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.