ADVERTISEMENT

ಏರ್‌ಪೋರ್ಟ್‌ ಕಾಮಗಾರಿಗೆ ವೇಗ

24 ಎಕರೆ ಭೂ ಸ್ವಾಧೀನ ಬಾಕಿ; ₹40 ಕೋಟಿ ಅನುದಾನ ಬಿಡುಗಡೆ: ಅನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 1:58 IST
Last Updated 2 ಏಪ್ರಿಲ್ 2022, 1:58 IST
ಬೂವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್‌ ಕುಮಾರ್ ಪರಿಶೀಲಿಸಿದರು. ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ ಸಿಇಒ ಕಾಂತರಾಜ್, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಇದ್ದಾರೆ
ಬೂವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್‌ ಕುಮಾರ್ ಪರಿಶೀಲಿಸಿದರು. ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ ಸಿಇಒ ಕಾಂತರಾಜ್, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಇದ್ದಾರೆ   

ಹಾಸನ: ‘ನಗರ ಸಮೀಪದ ಬೂವನ ಹಳ್ಳಿಯಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು 2023ರ ಏಪ್ರಿಲ್‌ಗೆ ಪೂರ್ಣಗೊಳಿಸಿ, ವಿಮಾನ ಹಾರಾಟ ಆರಂಭಿಸಲು ಉದ್ದೇಶಿಸ ಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಅನಿಲ್ ಕುಮಾರ್ ತಿಳಿಸಿದರು.

ಬೂವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಈಗಾಗಲೇ ಅಧಿಕಾರಿಗಳ ಜತೆಚರ್ಚಿಸಿದ್ದು, ಎಲ್ಲಾ ರೀತಿಯ ಅಡೆ ತಡೆಗಳನ್ನು ನಿವಾರಣೆ ಮಾಡುವ ಕೆಲಸ ತೀವ್ರಗತಿಯಲ್ಲಿ ಆಗುತ್ತಿದೆ’ ಎಂದರು.

‘ವಿಮಾನ ನಿಲ್ದಾಣಕ್ಕೆ ಒಟ್ಟು ₹192.65 ಕೋಟಿ ಅಂದಾಜು ಯೋಜನೆತಯಾರಿಸಲಾಗಿದೆ. ಇದರಲ್ಲಿ ರನ್‌ವೇ ಟರ್ಮಿನಲ್‌ ಬಿಲ್ಡಿಂಗ್‌, ಎಟಿಸಿ ಬಿಲ್ಡಿಂಗ್, ಕಾಂಪೌಂಡ್‌, ಹೈಟೆನ್ಷನ್‌ ತಂತಿ ಸ್ಥಳಾಂತರ ಸೇರಿದೆ. ಎರಡು ಪ್ಯಾಕೇಜ್‌ನಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈವರೆಗೆ ₹40 ಕೋಟಿ ಹಣ ಬಿಡುಗಡೆಯಾಗಿದೆ. ಅಲ್ಲದೇ ಹೈಟೆನ್ಷನ್‌ ತಂತಿ ಸ್ಥಳಾಂತರಕ್ಕೆ ಕೆಪಿಟಿಸಿಎಲ್‌ಗೆ ₹19 ಕೋಟಿ ಹಣ ಜಮಾ ಮಾಡಲಾಗಿದೆ’ ಎಂದರು.

ADVERTISEMENT

‘ಸದ್ಯ ಕಾಮಗಾರಿ ಪ್ರಗತಿ ಉತ್ತಮವಾಗಿದೆ. ಗುತ್ತಿಗೆದಾರರು ಕೆಲ ಸಣ್ಣಪುಟ್ಟಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಭೂಸ್ವಾಧೀನ ಪ್ರಕ್ರಿಯೆ ಸುಮಾರು 24 ಎಕರೆಯಷ್ಟು ಬಾಕಿ ಇದೆ. ಕೆಲರೈತರಿಗೆ ಪರಿಹಾರ ಕೊಡಲು ಅಂತಿಮ ನೋಟಿಫಿಕೇಶನ್ ಆಗಿದೆ. ಪರಿಹಾರ ಕೊಡುವ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಅದಾದ ಕೂಡಲೇ ಏರ್‌ಪೋರ್ಟ್‌ಗೆಂದು ಸ್ವಾಧೀನ ಪಡಿಸಿರುವ 536 ಎಕರೆಗೂ ಕಾಂಪೌಂಡ್ ಹಾಕಿ ಕಾಮಗಾರಿಗೆ ವೇಗ ನೀಡಲಾಗುವುದು’ ಎಂದರು.

‘ವಿಮಾನ ನಿಲ್ದಾಣ ಸುತ್ತಮುತ್ತಲ ಗ್ರಾಮಗಳ ರೈತರು ಈ ಮೊದಲು ಕಾಮಗಾರಿ ನಡೆಯುತ್ತಿರುವ ಜಾಗದಲ್ಲೇ ಓಡಾಡುತ್ತಿದ್ದರು. ಅವರಿಗೀಗ ರಸ್ತೆ ಇಲ್ಲವಾಗಿದೆ.ಪ್ರತ್ಯೇಕ ರಸ್ತೆ ಬೇಡಿಕೆಗೆ ಒಪ್ಪಿ 536 ಎಕರೆಯಲ್ಲೇ ಏರ್‌ಪೋರ್ಟ್ ಬೌಂಡರಿಅಂಚಿನಲ್ಲೇ ಸುಮಾರು 9 ಮೀಟರ್ ಜಾಗವನ್ನು ಬಿಟ್ಟುಕೊಟ್ಟು, 5 ಕಿ.ಮೀಉದ್ದದ ರಸ್ತೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ’ ಎಂದರು.

‘ಶೀಘ್ರವೇ ರಸ್ತೆ ಕಾಮಗಾರಿ ಮುಗಿಸುವಂತೆಯೂ ಸೂಚಿಸಲಾಗಿದ್ದು, ಸುತ್ತಮುತ್ತಲ ರೈತರಿಗೆ ಅನುಕೂಲ ವಾಗಲಿದೆ. ಅದಾದ ನಂತರ ಕಾಂಪೌಂಡ್ ನಿರ್ಮಿಸಲಾಗುವುದು’ ಎಂದು ಹೇಳಿದರು.

‌ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಾಂತರಾಜ್, ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ಹಾಗೂ ತಹಶೀಲ್ದಾರ್ ನಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.