ADVERTISEMENT

ಹಾಸನ | ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವೂ ಬೇಕು: ಎಚ್.ಎಂ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:46 IST
Last Updated 28 ಜುಲೈ 2025, 5:46 IST
ಹಾಸನ ಸಮೀಪದ ನಾಗತವಳ್ಳಿಯ ನಂದಗೋಕುಲ ಕನ್ವೆನ್ಷನ್‌ ಹಾಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಹಾಸನ ಸಮೀಪದ ನಾಗತವಳ್ಳಿಯ ನಂದಗೋಕುಲ ಕನ್ವೆನ್ಷನ್‌ ಹಾಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಹಾಸನ: ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣದ ಕನಸಿನ ಜೊತೆಗೆ ಸಾಧಿಸುವ ಛಲವೂ ಬೇಕು ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.

ಸಮೀಪದ ನಾಗತವಳ್ಳಿಯ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹಳ್ಳಿಕಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್‌ಎಂಆರ್ ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸುವಲ್ಲಿ ಹಿಂದೆ ಬೀಳಬಾರದು. ಅದರಲ್ಲೂ ಹೆಣ್ಣುಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಇರುವುದನ್ನು ಕಾಣುತ್ತಿದ್ದೇವೆ. ಟ್ರಸ್ಟ್ ಮೂಲಕ ಸಮುದಾಯದ ಅಭಿವೃದ್ಧಿಗೆ ನಾಗರಾಜ ಅವರ ಕೊಡುಗೆ ಅಪಾರ’ ಎಂದರು.

ADVERTISEMENT

ಡಾ.ಅಂಬೇಡ್ಕರ್ ಅವರ ಆಶಯವಾದ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ತಮ್ಮ ಸಮುದಾಯದ ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

‘ಹಳ್ಳಿಕಾರ ಹಿಂದುಳಿದ ಸಮುದಾಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಆರ್ಥಿಕ, ಸಾಮಾಜಿಕವಾಗಿ ಮುಂದೆ ಇರುವ ಸಮುದಾಯದ ಮಂದಿ, ಹಿಂದುಳಿದವರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬೇಡ ಜಂಗಮ, ಸಾದರ ಲಿಂಗಾಯತ ಹಾಗೂ ಪಂಚಮಸಾಲಿಗಳು ಹಿಂದುಳಿದ ಸಮಾಜದ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಕಂಡಿದ್ದೇವೆ. ಇದನ್ನು ತಡೆಯಬೇಕಿದೆ. ಹಳ್ಳಿಕಾರ ಸಮುದಾಯದವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಹಳ್ಳಿಕಾರ್ ಫೌಂಡೇಶನ್ ಟ್ರಸ್ಟ್‌ ಅಧ್ಯಕ್ಷ ಕೆ.ಎಂ. ನಾಗರಾಜ್ ಮಾತನಾಡಿ, ‘ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಸಮಾಜಕ್ಕೆ ಸಹಾಯವಾಗದಿದ್ದರೂ, ತಮ್ಮ ಕುಟುಂಬಕ್ಕೆ ನೆರವಾಗಬೇಕು’ ಎಂದರು.

ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಇದರಿಂದ ಉತ್ತಮ ಸಾಧನೆ ಮಾಡಬಹುದು. ವೈದ್ಯಕೀಯ ಹಾಗೂ ಎಂಜಿನಿಯರ್ ಪದವಿಗೆ ಜೋತು ಬೀಳದೇ ಉನ್ನತ ವ್ಯಾಸಂಗಕ್ಕೆ ಇರುವ ಅನೇಕ ವಿಭಾಗಗಳಲ್ಲಿ ಪದವಿ ಪಡೆಯಬಹುದಾಗಿದೆ ಎಂದು ಹೇಳಿದರು.

ಶಾಸಕ ಎಚ್.ಡಿ. ತಮ್ಮಯ್ಯ, ‘ಹುಟ್ಟು ಸಾವಿನ ನಡುವೆ ಗಳಿಸಿದ ಅಸ್ತಿಯಲ್ಲಿ ಸಮಾಜಕ್ಕೆ ಒಂದು ಪಾಲನ್ನು ಇಡುವ ಗುಣ ಹೊಂದಿರುವ ನಾಗರಾಜ್ ಅವರ ಸಮಾಜ ಸೇವೆ ಪ್ರಶಂಸಾರ್ಹ. ಟ್ರಸ್ಟ್‌ ಮನವಿಯಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ನಿವೇಶನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ಪತ್ರಕರ್ತ ಸುದರ್ಶನ್ ಚೆನ್ನಂಗಿಹಳ್ಳಿ, ಶ್ರೀನಿವಾಸ ಮೂರ್ತಿ, ಆನಂದ್, ನಾರಾಯಣ ಮೂರ್ತಿ, ಶಶಾಂಕ್ ಹಾಜರಿದ್ದರು‌.

ಹಳ್ಳಿಕಾರ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲಿ ಎಂದು ಪ್ರತಿಭಾ ಪುರಸ್ಕಾರದ ಮೂಲಕ ಸಹಕರಿಸುತ್ತಿರುವ ನಾಗರಾಜ್ ಅವರ ಕಾರ್ಯ ಶ್ಲಾಘನೀಯ
– ಶ್ರೇಯಸ್ ಪಟೇಲ್, ಸಂಸದ

ಹುಡಾ ಅಧ್ಯಕ್ಷರಾಗಿ ಪಟೇಲ್ ಶಿವಪ್ಪ?

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ಗೊಂದಲ ಮುಂದುವರಿದಿರುವಾಗಲೇ ವೇದಿಕೆಯಲ್ಲಿ ಹಾಜರಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಟೇಲ್ ಶಿವಪ್ಪ ಮುಂದಿನ ಹುಡಾ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂದು ಎಚ್.ಎಂ ರೇವಣ್ಣ ಸೇರಿದಂತೆ ವೇದಿಕೆಯಲ್ಲಿದ್ದ ಇತರೆ ಗಣ್ಯರು ಪ್ರಸ್ತಾಪಿಸಿದ್ದು ಅಚ್ಚರಿ ಮೂಡಿಸಿತು. ಪಟೇಲ್ ಶಿವಪ್ಪ ಹುಡಾ ಅಧ್ಯಕ್ಷರಾಗುವ ಮಾಹಿತಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಬಹಿರಂಗವಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.