ಹಾಸನ: ಇಲ್ಲಿನ ಹೇಮಾವತಿ ನಗರದ ನಿವಾಸಿಗಳಾದ ಸತ್ಯಪ್ರಸಾದ್ (54) ಮತ್ತು ಅನ್ನಪೂರ್ಣ (50) ದಂಪತಿ, ಅವರ ಮಗ ಗೌರವ್ (21) ಆರ್ಥಿಕ ಸಂಕಷ್ಟದಿಂದ ಬೇಸತ್ತು ಕಳೆನಾಶಕ ಸೇವಿಸಿ ಗುರುವಾರ ಆತ್ಮಹತ್ಯೆ ಮಾಡಿಕೊಂಡರು.
ಸೀಮೆಎಣ್ಣೆ ವ್ಯಾಪಾರಿಯಾಗಿದ್ದ ಸತ್ಯಪ್ರಸಾದ್, ಕೆಲ ತಿಂಗಳ ಹಿಂದೆತಾಲ್ಲೂಕಿನ ಇಬ್ದಾಣೆ ಬಳಿ ಪೆಟ್ರೋಲ್ ಬಂಕ್ವೊಂದನ್ನು ಗುತ್ತಿಗೆಗೆ ಪಡೆದಿದ್ದರು. ಅದಕ್ಕಾಗಿ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ನಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರು. ಆದರೆ, ಪೆಟ್ರೋಲ್ ಬಂಕ್ನಿಂದ ನಿರೀಕ್ಷಿತ ಆದಾಯ ಬಾರದೆ ನಷ್ಟ ಅನುಭವಿಸಿ, ಇನ್ನೊಬ್ಬರಿಗೆ ವಹಿಸಿದ್ದರು.
ಮತ್ತೊಂದೆಡೆ, ಹಳೇ ಮನೆಯನ್ನು ಮಾರಾಟ ಮಾಡಿ ಹಾಲಿ ಇದ್ದ ಮನೆಯನ್ನು ಖರೀದಿಸಿದ್ದರು. ಆದರೆ, ಅದರ ದಾಖಲಾತಿಗಳು ಸರಿಯಿರಲಿಲ್ಲ. ಇತ್ತೀಚೆಗೆ ಅವರ ಕಾರನ್ನು ಹಣಕಾಸು ಸಂಸ್ಥೆ ಸಿಬ್ಬಂದಿ ಜಪ್ತಿ ಮಾಡಿದ್ದರಿಂದ ಕುಟುಂಬ ಖಿನ್ನತೆಗೆ ಒಳಗಾಗಿತ್ತು. ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಮಗ ಗೌರವ್ಗೆ ಕಳೆದ ತಿಂಗಳು ಉಪನಯನ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.