ಅರಸೀಕೆರೆ: ಇತಿಹಾಸ ಪ್ರಸಿದ್ಧ ಹಾಗೂ ಶಕ್ತಿದೇವತೆ ಎಂದೇ ಭಕ್ತರ ಮನದಲ್ಲಿ ಮನೆ ಮಾತಾಗಿರುವ ತಾಲ್ಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯವರ ವಿಸರ್ಜನಾ ಮಹೋತ್ಸವವು ಸೆ. 17ರಂದು ನೆರವೇರಲಿದೆ.
ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಮಧ್ಯಾಹ್ನ ಅಂದು ಮಧ್ಯಾಹ್ನ 2.30ಕ್ಕೆ ಊರ ಮುಂದಿನ ಕಲ್ಯಾಣಿಯಲ್ಲಿ ವಿಸರ್ಜಿಸಲಾಗುವುದು. ಸೆ.6ರಂದು ಗೌರಿ ಹಬ್ಬದಂದು ಎರೆಹಳ್ಳಿ ರಸ್ತೆ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯವರ ದೇವಾಲಯದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಗ್ರಾಮದ ದೇವರಾದ ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಗೌರಮ್ಮ ಪ್ರತಿಷ್ಠಾಪನೆ ನೆರವೇರಿಸಿದ್ದರು.
ಸಂಪ್ರದಾಯದಂತೆ ನಿತ್ಯ ತ್ರಿಕಾಲ ಪೂಜೆಯು ನಡೆಯುತ್ತಿದೆ. ದೇವಿಯ ದರ್ಶನಕ್ಕೆ ಸರ್ವ ಸಮುದಾಯದ ಸಾವಿರಾರು ಭಕ್ತರು ಸರತಿ ಸಾಲಿನಂತೆ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ವಿಶೇಷವಾಗಿ ಮುಸ್ಲಿಂ ಮಹಿಳೆಯರು ದರ್ಶನ ಪಡೆಯುತ್ತಿದ್ದಾರೆ.
ಸೆಪ್ಟೆಂಬರ್ 17ರಂದು ಬೆಳಿಗ್ಗೆ ದೇವಾಲಯದ ಮುಂಭಾಗ ಚಂದ್ರಮಂಡಲ ಉತ್ಸವ ಹಾಗೂ ಗುಗ್ಗಳೋತ್ಸವ, ನೂರಾರು ಮಹಿಳೆಯರು ತಲೆಯ ಮೇಲೆ ಕರ್ಪೂರ ಬಟ್ಟಲನ್ನು ಹೊತ್ತು ತಮ್ಮ ಸೇವೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1ಗಂಟೆಯನ ನಂತರ ಕೋಡಿಮಠದ ಶ್ರೀಗಳ ಸಮ್ಮುಖದಲ್ಲಿ ಗೌರಮ್ಮ ದೇವಿಯನ್ನು ವಿಸರ್ಜಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.