ADVERTISEMENT

ಬಿಎಸ್‌ವೈ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ: ಶಾಸಕ ಪ್ರೀತಂ ಜೆ.ಗೌಡ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:18 IST
Last Updated 18 ಸೆಪ್ಟೆಂಬರ್ 2020, 14:18 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಹಾಸನ: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬದಲಾವಣೆ ವಿಚಾರ ಪಕ್ಷದಲಿಲ್ಲ. ಅವರು ಪೂರ್ಣಾವಧಿಗೆ ಸಿ.ಎಂ ಆಗಿರುವುದು ಸೂರ್ಯ, ಚಂದ್ರ ಇರುವಷ್ಟೇ ಸತ್ಯ. ಮುಂದಿನ ಚುನಾವಣೆ ಕೂಡ ಬಿಎಸ್‌ವೈ ನೇತೃತ್ವದಲ್ಲಿ ನಡೆಯಲಿದೆ’ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಾಧ್ಯಮಗಳಿಗೆ ರಾಜಕೀಯವಾಗಿ ಚರ್ಚೆ ಮಾಡಲು ಒಂದು ವಿಚಾರ ಬೇಕು. ಹಾಗಾಗಿ ಸಿ.ಎಂ ಬದಲಾಗುತ್ತಾರೆ ಎಂದು ಆರೋಗ್ಯಕರವಾಗಿ ಚರ್ಚೆ ನಡೆಯುತ್ತಿದೆ. ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲಿಯೇ ನಡೆಯಲಿದೆ. ಚರ್ಚೆಯನ್ನು ಯಾರೋ ಹುಟ್ಟು ಹಾಕಿದ್ದಾರೆ. ಪಕ್ಷದ 120 ಕ್ಕೂ ಹೆಚ್ಚು ಶಾಸಕರು ಸರ್ಕಾರ ಸುಭದ್ರವಾಗಿ, ಅಭಿವೃದ್ಧಿ ಪರವಾಗಿ ನಡೆಯಬೇಕು ಎಂದು ಕಂಕಣಬದ್ಧರಾಗಿ ಸಿ.ಎಂ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ತಿಳಿಸಿದರು.

‘ವಿವಿಧ ಇಲಾಖೆಗಳಿಗೆ ಕಾರ್ಯ ಹಾಗೂ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಅವರು ದೆಹಲಿಗೆ ಹೋಗಿದ್ದಾರೆ.ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ಕುರಿತು ಮುಖ್ಯಮಂತ್ರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷರ ತೀರ್ಮಾನ. ಇದರಿಂದ ಪಕ್ಷದಲ್ಲಿ ಯಾವ ಅಸಮಾಧಾನವೂ ಉಂಟಾಗುವುದಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ಶಿಸ್ತಿನ ಸಿಪಾಯಿ’ ಎಂದರು.

ADVERTISEMENT

‘ಬಿ.ವೈ.ವಿಜಯೇಂದ್ರ ಸೂಪರ್ ಸಿಎಂ’ಎಂದು ವಿರೋಧ ಪಕ್ಷದವರು ಹೇಳುತ್ತಾರೆ ಅಂದರೆ ಅವರ ಪ್ರಭಾ ಹೆಚ್ಚಾಗುತ್ತಿದೆ ಎಂದರ್ಥ. ಮುಂದಿನ ದಿನಗಳಲ್ಲಿ ಸಿಎಂ ಆಗುವ ಎಲ್ಲಾ ಅರ್ಹತೆ ಮತ್ತು ಯೋಗ್ಯತೆಯನ್ನು ಅವರು ಇಟ್ಟುಕೊಂಡಿದ್ದಾರೆ. ಅವರು ಸೂಪರ್ ಸಿ.ಎಂ ಅಲ್ಲ, ಮುಂದೊಂದು ದಿನ‌ ಸಿ.ಎಂ ಆಗುತ್ತಾರೆ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.