ADVERTISEMENT

ಶಿಸ್ತುಬದ್ಧ ಜೀವನದಿಂದ ಆರೋಗ್ಯ: ಸಿವಿಲ್ ನ್ಯಾಯಾಧೀಶೆ ಅರುಣಕುಮಾರಿ

ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 13:49 IST
Last Updated 8 ಜನವರಿ 2025, 13:49 IST
ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಿದ್ದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣಕುಮಾರಿ ಮಾತನಾಡಿದರು. ಡಾ.ವಿ. ಮಹೇಶ್, ಡಾ.ಅರುಣ್‍ಕುಮಾರ್, ಕೆ.ಎನ್. ಸುಂದರರಾಜ್, ಎ.ಡಿ. ಕುಮಾರ್, ಡಾ.ಎ. ಎನ್. ಕಿಶೋರ್‌ ಕುಮಾರ್ ಭಾಗವಹಿಸಿದ್ದರು
ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಿದ್ದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣಕುಮಾರಿ ಮಾತನಾಡಿದರು. ಡಾ.ವಿ. ಮಹೇಶ್, ಡಾ.ಅರುಣ್‍ಕುಮಾರ್, ಕೆ.ಎನ್. ಸುಂದರರಾಜ್, ಎ.ಡಿ. ಕುಮಾರ್, ಡಾ.ಎ. ಎನ್. ಕಿಶೋರ್‌ ಕುಮಾರ್ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ಕಾಯಿಲೆ ಬರದಂತೆ ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣಕುಮಾರಿ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಆಸ್ಪತ್ರೆಯ ಸಹಯೊಗದಲ್ಲಿ ಬುಧವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಕ್ಷಯರೋಗ ನಿವಾರಣೆಗೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನದ ಚಿಕಿತ್ಸೆ ಲಭ್ಯ ಇದೆ. ಇದರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಉತ್ತಮ ಚಿಕಿತ್ಸೆ ನೀಡುವಲ್ಲಿ ವೈದ್ಯರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವೈದ್ಯರು ದೇವರಿಗೆ ಸಮಾನ ಎಂದು ತಿಳಿಸಿದರು.

ADVERTISEMENT

ಆಸ್ಪತ್ರೆಯ ಹಿರಿಯ ಪ್ರಯೋಗಾಲಯ ಮೇಲ್ವಿಚಾರಕ ತಿಮ್ಮಯ್ಯ ಮಾತನಾಡಿ, ಕ್ಷಯರೊಗ ಸಾಂಕ್ರಾಮಿಕ ರೋಗವಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವರಲ್ಲಿ ಬೇಗ ಹರಡುತ್ತದೆ. ಕ್ಷಯ ರೋಗ ಇರುವ ಮನುಷ್ಯನ ಕಫದ ಮೂಲಕ ಕ್ರಿಮಿಗಳು ಹೊರಬಂದು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ದೇಹ ಪ್ರವೇಶಿಸುವುದರಿಂದ ಕ್ಷಯ ರೋಗಹರಡುತ್ತದೆ. ಎರಡು ವಾರಕ್ಕಿಂತ ಹೆಚ್ಚುಕಾಲ ಕೆಮ್ಮು, ದೇಹದ ತೂಕ ಕಡಿಮೆಯಾಗುವುದು. ಸಂಜೆ ಮತ್ತು ಬೆಳಿಗ್ಗೆ ಚಳಿಜ್ವರ ಬರುವುದು ಇದರ ಲಕ್ಷಣ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 110 ಕ್ಷಯ ರೋಗಿಗಳಿದ್ದಾರೆ. ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಷಯ ರೋಗ ನಿವಾರಣೆಗೆ ಸೂಕ್ತ ಚಿಕಿತ್ಸೆ ನೀಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿ. ಮಹೇಶ್ ಮಾತನಾಡಿ, ಕ್ಷಯಮುಕ್ತ ಭಾರತ ಅಭಿಯಾನ ಕಳೆದ ಡಿಸೆಂಬರ್ 7ರಿಂದ ಆರಂಭವಾಗಿದ್ದು, ಮಾರ್ಚ್24ವರೆಗೆ ಇರುತ್ತದೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ಎನ್. ಕಿಶೋರ್ ಕುಮಾರ್ ಮಾತನಾಡಿ, ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಸೌಲಭ್ಯ ಇದೆ. ಆದರೆ ಚಾಲಕರ ಸಮಸ್ಯೆ ಇದೆ ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಂದರರಾಜ್, ಕಾರ್ಯದರ್ಶಿ ಎ.ಡಿ. ಕುಮಾರ್, ಡಾ. ಅರುಣ್ ಕುಮಾರ್, ಡಾ. ಹರೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾದಿಕಾರಿ ಎ.ಆರ್. ಅನಿತಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.