ADVERTISEMENT

ಕೊಣನೂರು: ಹೊರ ರಾಜ್ಯಗಳ ಕಾರ್ಮಿಕರ ಪರಿಶೀಲನೆ

ಅಕ್ರಮ ಚಟುವಟಿಕೆ ಪತ್ತೆಹಚ್ಚುವುದು ಮತ್ತು ದೇಶದ ಭದ್ರತೆಗಾಗಿ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 3:04 IST
Last Updated 17 ಜುಲೈ 2025, 3:04 IST
ರಾಮನಾಥಪುರ ಹೋಬಳಿಯ ಹನ್ಯಾಳು ಬಳಿ ಜಲಜೀವನ್ ಮಿಷನ್ ಘಟಕ ಕಾಮಗಾರಿಯ ಬಳಿ ಕಾರ್ಮಿಕರ ತಪಾಸಣೆಯನ್ನು ಜಿಲ್ಲಾ ಕಾರ್ಮಿಕ ಇಲಾಖೆ ಮುಖ್ಯಸ್ಥೆ ಯಮುನಾ ಹಾಗೂ ಅಧಿಕಾರಿಗಳು ನಡೆಸಿದರು 
ರಾಮನಾಥಪುರ ಹೋಬಳಿಯ ಹನ್ಯಾಳು ಬಳಿ ಜಲಜೀವನ್ ಮಿಷನ್ ಘಟಕ ಕಾಮಗಾರಿಯ ಬಳಿ ಕಾರ್ಮಿಕರ ತಪಾಸಣೆಯನ್ನು ಜಿಲ್ಲಾ ಕಾರ್ಮಿಕ ಇಲಾಖೆ ಮುಖ್ಯಸ್ಥೆ ಯಮುನಾ ಹಾಗೂ ಅಧಿಕಾರಿಗಳು ನಡೆಸಿದರು    

ಕೊಣನೂರು: ಬಾಂಗ್ಲಾ ಮೂಲದ ಕಾರ್ಮಿಕರು ಉತ್ತರ ಭಾರತದವರ ಸೋಗಿನಲ್ಲಿ ಕೂಲಿ ಕಾರ್ಮಿಕರಾಗಿ ನೆಲೆಸಿರುವ ಅನುಮಾನದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಣನೂರು ಹೋಬಳಿಯ ಸಬ್ಬತ್ತಿ ಬಳಿಯಿರುವ ಶುಂಠಿ ಶುದ್ಧೀಕರಣ ಘಟಕ, ರಾಮನಾಥಪುರದ ಕೃಷ್ಣ ಸಿಮೆಂಟ್ ಪ್ರಾಡಕ್ಟ್ ಮತ್ತು ಹೋಬಳಿಯ ಹನ್ಯಾಳು ಗ್ರಾಮದ ಸಮೀಪ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್ ಕಾಮಗಾರಿಯ ಬಳಿ ತೆರಳಿದ ಹಾಸನ ಜಿಲ್ಲಾ ಕಾರ್ಮಿಕ ಇಲಾಖೆ ಮುಖ್ಯಸ್ಥೆ ಯಮುನಾ ಅವರ ನೇತೃತ್ವದಲ್ಲಿ ತೆರಳಿದ ತಂಡವು ಕಾರ್ಮಿಕರ ಆಧಾರ್ ಕಾರ್ಡ್‌ ದಾಖಲೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ನಕಲಿ ಗುರತಿನ ಚೀಟಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಮಾನಗಳಿದ್ದಲ್ಲಿ ಕೂಲಂಕಷವಾಗಿ ತನಿಖೆ ನಡೆಸಿದರು.

ಅಸ್ಸಾಂ, ಬಿಹಾರ, ಒಡಿಶಾ, ಉತ್ತರ ಪ್ರದೇಶ, ತಮಿಳುನಾಡು ಮೂಲದ ಮತ್ತಿತರ ಹೊರ ರಾಜ್ಯಗಳ ವಲಸೆ ಕಾರ್ಮಿಕರು ವಿವಿಧೆಡೆ ದುಡಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡಿದರು. ಕಡಿಮೆ ವೇತನ ಮತ್ತು ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ  ಪ್ರಶ್ನೆ ಮಾಡಿದರು.

ADVERTISEMENT

ಹನ್ಯಾಳು ಗ್ರಾಮದ ಬಳಿ ಜಲಜೀವನ್ ಮಿಷನ್ ಕಾಮಗಾರಿ ಘಟಕದಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಸಿಬ್ಬಂದಿ ಆಧಾರ್ ಕಾರ್ಡ್‌ ತಪಾಸಣೆ ಮಾಡಿ, ಕಾರ್ಮಿಕ ಇಲಾಖೆಗೆ ಕಾರ್ಮಿಕರ ಸೆಸ್ ಪಾವತಿಸಿದ ಕಾರಣ ನೋಟಿಸ್ ನೀಡಿದರು.

ಕಾರ್ಮಿಕ ಇಲಾಖೆಯ ನಿರೀಕ್ಷಕ ರಘು, ಗುಪ್ತಚರ ಇಲಾಖೆಯ ಸಬ್ ಇನ್‌ಸ್ಪೆಕ್ಟರ್‌ ಕಿರಣ್, ಗುಪ್ತಚರ ಇಲಾಖೆ ಸಿಬ್ಬಂದಿ ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.