ADVERTISEMENT

ಶ್ರೀಕ್ಷೇತ್ರ ಕುಂದೂರಮಠದಲ್ಲಿ ವಿಜಯದಶಮಿ ಸಂಭ್ರಮ

ಬನ್ನಿ ಕಡಿದು ಶುಭ ಹಾರೈಸಿದ ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:42 IST
Last Updated 27 ಅಕ್ಟೋಬರ್ 2020, 3:42 IST
ಚನ್ನರಾಯಪಟ್ಟಣ ತಾಲ್ಲೂಕು ಕುಂದೂರು ಮಠದಲ್ಲಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆದಿಚುಂಚನಗಿರಿ ಮಠಾಧೀಶರಾದ  ನಿರ್ಮಲಾನಂದನಾಥ ಸ್ವಾಮೀಜಿ  ವಿಜಯದಶಮಿಯಂದು ಬನ್ನಿ ಕಡಿದರು
ಚನ್ನರಾಯಪಟ್ಟಣ ತಾಲ್ಲೂಕು ಕುಂದೂರು ಮಠದಲ್ಲಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆದಿಚುಂಚನಗಿರಿ ಮಠಾಧೀಶರಾದ  ನಿರ್ಮಲಾನಂದನಾಥ ಸ್ವಾಮೀಜಿ  ವಿಜಯದಶಮಿಯಂದು ಬನ್ನಿ ಕಡಿದರು   

ಚನ್ನರಾಯಪಟ್ಟಣ: ಶ್ರೀಕ್ಷೇತ್ರ ಕುಂದೂರಮಠದಲ್ಲಿ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಬನ್ನಿ ಕಡಿದು ವಿಜಯದಶಮಿ ಆಚರಿಸಿದರು.

ಕ್ಷೇತ್ರದ ರಂಗನಾಥಸ್ವಾಮಿ ಮತ್ತು ಮೆಳಿಯಮ್ಮ ದೇವಿಯನ್ನು ನಾದಸ್ವರದೊಂದಿಗೆ ಮೆರವಣಿಗೆ ಮಾಡಲಾಯಿತು. ಕರಡೆ ಗ್ರಾಮದ ರಸ್ತೆಯಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣಕ್ಕೆ ಕರೆತಂದು ಬನ್ನಿ ಮರದ ಮಂಭಾಗದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

ಬೆಳಿಗ್ಗೆ 10ಕ್ಕೆ ಕ್ಷೇತ್ರಕ್ಕೆ ಆಗಮಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭಕ್ತರು ಪೂರ್ಣಕುಂಭ ಕಳಸದೊಂದಿಗೆ ಬರಮಾಡಿಕೊಂಡರು. ನಂತರ ಶ್ರೀಗಳು ವೀರಭದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಶ್ರೀಮಠದ ಪದ್ಧತಿಯಂತೆ ಕಿರೀಟ ಧರಿಸಿದರು. ವಿಶೇಷ ಆಭರಣಗಳನ್ನು ತೊಡಿಸಿ ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ನಾದಸ್ವರದೊಂದಿಗೆ ಸ್ವಾಮೀಜಿ ಅವರನ್ನು ಕರೆತರಲಾಯಿತು.

ADVERTISEMENT

ಬನ್ನಿಮಂಟಪದ ಬಳಿ ರಂಗನಾಥ ಸ್ವಾಮಿ, ಮೆಳಿಯಮ್ಮ ದೇವಿಗೆ ಮಹಾಮಂಗಳಾರತಿ ನೆರವೇರಿಸಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಮರದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಬಳಿಕ ಬನ್ನಿ ಕಡಿಯಲಾಯಿತು.

ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ‘ಸಮಾಜದಲ್ಲಿರುವ ದೋಷ ನಿವಾರಣೆಯಾಗಿ, ನಾಡಿನ ಜನತೆಗೆ ಒಳಿತಾಗಲಿ. ಉತ್ತಮ ಮಳೆ, ಬೆಳೆಯೊಂದಿಗೆ ನಾಡು ಸಮೃದ್ಧವಾಗಿ ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲಿ’ ಎಂದು ನುಡಿದರು.

ಆದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿಯ ಶಿವಪುತ್ರ ಸ್ವಾಮೀಜಿ, ರಾಜ್ಯ ಫೆಡರೇಶನ್ ನಿರ್ದೇಶಕ ಡಿ.ಎಲ್. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಶಿಕಲಾ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್. ಅಶೋಕ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.