ಆಲೂರು: ತಾಲ್ಲೂಕಿನಲ್ಲಿ 15 ದಿನಗಳಿಂದ ನಿರಂತರವಾಗಿ ಸೋನೆ ಮಳೆಯಾಗಿದ್ದು, ಬಿತ್ತನೆ ಮಾಡಿದ ಮುಸುಕಿನ ಜೋಳ ಮತ್ತು ಕಳೆ ಒಟ್ಟಿಗೆ ಬೆಳೆಯುತ್ತಿವೆ. ಕಳೆಯಿಂದ ಜೋಳವನ್ನು ಬೇರ್ಪಡಿಸಲು ರೈತರು ಹರಸಾಹಸ ಮಾಡುವಂತಾಗಿದೆ.
ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಜೋಳ ಬಹುತೇಕ ಚೆನ್ನಾಗಿ ಬೆಳೆದಿದ್ದರೂ, ಬಿಳಿಸುಳಿ ಇತರೆ ರೋಗದಿಂದ ನಲುಗಿದೆ. ತೇವಾಂಶ ಹೆಚ್ಚಾಗಿ ಗಿಡಗಳು ಸೊರಗುತ್ತಿವೆ. ಆದರೆ ಹತ್ತಾರು ದಿನಗಳ ಹಿಂದೆ ಮಳೆ ಬಿಡುವಾದ ಸಂದರ್ಭದಲ್ಲಿ ಬಿತ್ತನೆ ಮಾಡಿದ ಜೋಳ ಕಳೆಯೊಡನೆ ಬೆಳೆಯುತ್ತಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಬಿರುಸಾಗಿ ಅಡ್ಡಮಳೆ ಬಂದಿದ್ದರೆ, ಗಿಡದಲ್ಲಿರುವ ಹುಳುಗಳು ಸಂಪೂರ್ಣ ನಾಶವಾಗುತ್ತಿದ್ದವು. ಆದರೆ ಸೋನೆ ಮಳೆ ಮತ್ತು ತೇವಾಂಶ ಸೃಷ್ಟಿಯಾಗಿದ್ದರಿಂದ ಹುಳುಗಳು ಯಥೇಚ್ಚವಾಗಿ ಹೆಚ್ಚಾಗಿ, ಗಿಡಗಳು ಬಿಳಿ ಬಣ್ಣಕ್ಕೆ ತಿರುಗಿ ತೀವ್ರ ರೋಗಕ್ಕೊಳಗಾದವು. ಈಗಲೂ ಹೊಲದೊಳಗೆ ತಿರುಗಾಡಲು ಅಸಾಧ್ಯವಾದ ಶೀತದಿಂದ ಕೂಡಿದೆ. ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಹೇಳಿದರು.
ನಿರಂತರ ಮಳೆ ಆಗಿದ್ದರಿಂದ ರೋಗ ತಡೆಯಲು ರೈತರು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸದ್ಯ ಕನಿಷ್ಠ ಒಂದು ವಾರ ಬಿಸಿಲು ಬಿದ್ದರೆ ಮಾತ್ರ ಜೋಳದ ಹೊಲದಲ್ಲಿ ಕಳೆ ತೆಗೆದು, ಕ್ರಿಮಿನಾಶಕ ಸಿಂಪಡಿಸಿ, ಗೊಬ್ಬರ ಹಾಕಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕಳೆ ತೆಗೆಯಲು ಸಾಧ್ಯವಾಗದೆ ರೈತರು ನಷ್ಟ ಅನುಭವಿಸುವಂತಾಗಲಿದೆ.
ಈಗಾಗಲೇ ಬಿಳಿಸುಳಿ ರೋಗದಿಂದ ತತ್ತರಿಸಿರುವ ತಾಲ್ಲೂಕಿನ ರೈತರಿಗೆ ಮಳೆ ಮತ್ತಷ್ಟು ಆತಂಕ ತಂದಿದೆ. ಮಳೆ ನಿರಂತರವಾಗಿ ಮುಂದುವರಿದಲ್ಲಿ, ಈ ಬಾರಿ ಬೆಳೆ ನಷ್ಟ ಅನುಭವಿಸಬೇಕು ಎನ್ನುವ ಚಿಂತೆ ರೈತರನ್ನು ಆವರಿಸಿದೆ.
ಇತ್ತೀಚೆಗೆ ಬಿತ್ತನೆ ಮಾಡಿರುವ ಜೋಳ ಮಳೆ ಶೀತದಿಂದ ನಲುಗಿದೆ. ಒಂದು ವಾರ ನಿರಂತರವಾಗಿ ಸುಡು ಬಿಸಿಲಾದರೆ ಮಾತ್ರ ಕಳೆ ತೆಗೆಯಲು ಸಾಧ್ಯ–ಕೌಶಿಕ್ ಮರಸುಹೊಸಳ್ಳಿ ರೈತ
ಹವಾವಾನ ವೈಪರೀತ್ಯದಿಂದ ಕೃಷಿಯಲ್ಲಿ ಏರುಪೇರಾಗಿದೆ. ಬಿಸಿಲು ಬಿದ್ದಾಗ ಕಳೆ ತೆಗೆದು ಕ್ರಿಮಿನಾಶಕ ಗೊಬ್ಬರ ಹಾಕಬೇಕು.–ರಮೇಶಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.