ಹಾಸನ: ಆಲೂರು ತಾಲ್ಲೂಕಿನ ನಾಗಾವರ ಗ್ರಾಮದಲ್ಲಿ ಪುಂಡಾನೆ ಸೆರೆಗೆ ಕೂಂಬಿಂಗ್ ನಡೆಸುತ್ತಿದ್ದ ವೇಳೆ, ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾಡಾನೆ ಅಟ್ಟಾಡಿಸಿಕೊಂಡು ಬಂದು ಕಾರ್ಯಾಚರಣೆಗೆ ಅಡ್ಡಿಪಡಿಸಿತು.
ಸೋಮವಾರ ಬೆಳಿಗ್ಗೆ 11.30 ರಿಂದ ಮೈಸೂರಿನಿಂದ ಬಂದಿದ್ದ ಆರು ಆನೆಗಳ ತಂಡ ಮೂರು ಗುಂಪುಗಳಾಗಿ ಕೂಂಬಿಂಗ್ ಆರಂಭಿಸಿತು. ಈ ವೇಳೆ ಮಾವುತರು, ಎರಡು ಆನೆಗಳನ್ನು ಕಾಡಾನೆ ಬರುವ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿದ್ದರು. ಮಧ್ಯಾಹ್ನ 3.30ರ ವೇಳೆಗೆ ಕಾಡಾನೆಗೆ ಅರಿವಳಿಕೆ ನೀಡಲು ತಂಡ ಸುತ್ತುವರೆಯಿತು. ಎರಡು ಸಾಕಾನೆಗಳನ್ನು ನಿಲ್ಲಿಸಿ ಕಾಯುತ್ತಿದ್ದ ಸ್ಥಳದಲ್ಲಿ ಪಕ್ಕದ ರಸ್ತೆಗೆ ಇಳಿದ ಒಂಟಿ ಸಲಗ (ಭೀಮಾ), ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಇಬ್ಬಂದಿ ಇರುವ ಕಡೆಗೆ ಧಾವಿಸಿ ಬಂತು. ಸ್ಥಳದಲ್ಲಿದ್ದವರು ಕೂಗಾಡುತ್ತಾ ಓಡತೊಡಗಿದರು. ಏನು ಮಾಡಬೇಕೆಂದು ತಿಳಿಯದೆ ಗಾಬರಿಗೊಂಡ ಮಾವುತ ಕೃಷ್ಣ, ಆನೆಯನ್ನು ತಿರುಗಿಸಿಕೊಂಡು ಓಡಿದರು.
ಸಂಜೆ 5 ಗಂಟೆಯಾಗುತ್ತಿದ್ದಂತೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಮಂಗಳವಾರ ಮತ್ತೊಂದು ಹೆಣ್ಣಾನೆಗೆ ರೇಡಿಯೊ ಕಾಲರ್ ಅಳವಡಿಕೆ ಅಥವಾ ಪುಂಡಾನೆ ಸೆರೆಗೆ ಕಾರ್ಯಾಚರಣೆ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು, ಎಸಿಎಫ್ ಹರೀಶ್ ಸ್ಥಳದಲ್ಲಿಯೇ ಇದ್ದು, ಮಾವುತರು ಹಾಗೂ ಕಾರ್ಯಾಚರಣೆ ತಂಡಕ್ಕೆ ನಿರ್ದೇಶನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.