ADVERTISEMENT

ಮಲೆನಾಡಿನಲ್ಲಿ ಗಜಪಡೆಯ ಆಟಾಟೋಪ

ತೋಟಗಳಿಗೆ ಹೋಗುವುದಕ್ಕೂ ಹೆದರಿಕೆ: ಕೆಲಸಕ್ಕೆ ಬರಲು ಒಪ್ಪದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:53 IST
Last Updated 16 ಸೆಪ್ಟೆಂಬರ್ 2022, 4:53 IST
ಹೆತ್ತೂರು ಹೋಬಳಿಯಲ್ಲಿ ಕಾಡಾನೆಯೊಂದು ತೋಟಕ್ಕೆ ನುಗ್ಗುತ್ತಿರುವುದು.
ಹೆತ್ತೂರು ಹೋಬಳಿಯಲ್ಲಿ ಕಾಡಾನೆಯೊಂದು ತೋಟಕ್ಕೆ ನುಗ್ಗುತ್ತಿರುವುದು.   

ಹೆತ್ತೂರು: ಮಲೆನಾಡು ಭಾಗದಲ್ಲಿ ಕೃಷಿಕರಿಗೆ ಈ ಬಾರಿ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ಒಂದೆಡೆ ಮಳೆ ನಿರಂತರವಾಗಿ ಸುರಿಯುತ್ತಿದ್ದರೆ, ಇನ್ನೊಂದೆಡೆ ಕಾಡಾನೆಗಳ ದಾಳಿಯೂ ಹೆಚ್ಚಾಗುತ್ತಿದೆ. ಕುಟುಂಬ ನಿರ್ವಹಣೆಗೆ ದಿಕ್ಕು ತೋಚದಂತಾಗಿರುವ ರೈತರು ಊರುಗಳನ್ನೇ ಬಿಟ್ಟು, ದೊಡ್ಡ ನಗರಗಳಿಗೆ ಹೋಗುತ್ತಿದ್ದಾರೆ.

ಹೆತ್ತೂರು ಹೋಬಳಿಯಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು, ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.
ಹೋಬಳಿಯ ಹಾಡ್ಲಹಳ್ಳಿ, ಕೊಂತನಮನೆ, ಹೊಸಹಳ್ಳಿ, ಚಿನ್ನಹಳ್ಳಿ, ಮರ್ಕಳ್ಳಿ, ಹಿರದನಹಳ್ಳಿ, ಜಾತಹಳ್ಳಿ, ಬೂಬ್ಬಹಳ್ಳಿ, ಕಲ್ಲುತೋಟ, ಮರ್ನಳ್ಳಿ, ಅತ್ತಿಹಳ್ಳಿ, ಕಿರ್ಕಳ್ಳಿ, ಅತ್ತಿಹಳ್ಳಿ, ಬಾಳೆಹಳ್ಳ, ಮಂಕನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳು ಸದಾ ಕಾಡಾನೆ ದಾಳಿಗೆ ಸಿಲುಕುವ ಪ್ರದೇಶಗಳಾಗಿವೆ.

‘ಮಳೆಗಾಲ ಪ್ರಾರಂಭವಾದೊಡನೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಬೆಳೆಯನ್ನು ರಕ್ಷಿಸಿಕೊಳ್ಳುವುದೇ ಸವಾಲಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಮನೆ ಬಾಗಿಲಿಗೆ ಬರುವ ಕಾಡಾನೆಗಳು ಆಹಾರಕ್ಕಾಗಿ ಅಲೆಯುವುದರಿಂದ ಬೆಳೆದ ಬೆಳೆ ಎಲ್ಲವೂ ನಾಶವಾಗಿ ಸಂಕಷ್ಟ ಎದುರಿಸುವಂತಾಗಿದೆ’ ಎಂಬುದು ಮಲೆನಾಡಿನ ರೈತರ ಅಳಲು.

ADVERTISEMENT

ಕಾರ್ಮಿಕರೂ ಬರುತ್ತಿಲ್ಲ: ಕಾಡಾನೆ ದಾಳಿ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೂ ಅಡ್ಡಿ ಆಗತೊಡಗಿದ್ದು, ಕಾರ್ಮಿಕರು ಕೃಷಿ ಕಾರ್ಯಗಳಿಗೆ ಬರಲು ಹಿಂದೇಟು ಹಾಕುವುದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ವರ್ಷ ಹೋಬಳಿಯಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು, ಕಾಡಾನೆ ದಾಳಿಯ ಭೀತಿ ಇಮ್ಮಡಿಸಿದೆ.

‘ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರೂ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ನಡೆಸುವಂತಾಗಿದೆ. ಯಾವಾಗ ಆನೆಗಳು ದಾಳಿ ಮಾಡುತ್ತವೆಯೋ ಎಂಬ ಆತಂಕ ಪ್ರತಿಕ್ಷಣವೂ ಕಾಡುತ್ತಿರುತ್ತದೆ. ಮನೆಯಿಂದ ಹೊರಗೆ ಹೋದವರು, ಹಿಂದಿರುಗಿ ಬರುತ್ತಾರೋ ಇಲ್ಲವೋ ಎನ್ನುವ ನಂಬಿಕೆಯೂ ಇರುವುದಿಲ್ಲ’ ಎನ್ನುವುದು ಕಾರ್ಮಿಕರ ಗೋಳು.

‘ಬಹಳ ಹಿಂದಿನಿಂದಲೂ ಕಾಡಾನೆಗಳು ಗ್ರಾಮಕ್ಕೆ ಬರುತ್ತಿದ್ದವು. ಬಂದ ಕಾಡಾನೆಗಳು ನಾಲ್ಕೈದು ದಿನಗಳಲ್ಲಿ ಅರಣ್ಯದತ್ತ ತೆರಳುತ್ತಿದ್ದವು. ಆದರೆ ಈಗ ಪ್ರತಿ ದಿನ ಬರತೊಡಗಿವೆ. ಕಾಡಾನೆ ದಾಳಿಗೆ ಹೆದರಿ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತಿದೆ. ಕಾಫಿ ತೋಟಗಳಿಗೆ ದಾಳಿ ಮಾಡಿ, ಕಾಫಿ ಗಿಡ, ಕಾಳುಮೆಣಸನ್ನು ನಾಶ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಮಕ್ಕಳಂತೆ ಸಾಕಿದ ಗಿಡಗಳನ್ನು ಕಳೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಪೃಥ್ವಿರಾಜ್.

ಮಲೆನಾಡಿನಲ್ಲಿ ಮಾನವ– ವನ್ಯಪ್ರಾಣಿಗಳ ಸಂಘರ್ಷವನ್ನು ತಡೆಯಲು ತುರ್ತು ಕ್ರಮ ಅಗತ್ಯವಾಗಿದ್ದು, ಸರ್ಕಾರ, ಸಂಘ–ಸಂಸ್ಥೆಗಳು ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ಈ ಭಾಗದ ನಾಗರಿಕರ ಒತ್ತಾಯವಾಗಿದೆ.

‘ಪ್ರಾಣಿಗಳಿಗೆ ಕಾಡಿನಲ್ಲೇ ಆಹಾರ ಸಿಗಲಿ’

‘ಅರಣ್ಯದಲ್ಲಿ ಕಾಡಾನೆಗಳಿಗೆ ಆಹಾರದ ಕೊರತೆ ಆಗುತ್ತಿರುವುದರಿಂದ ಬಾಳೆ, ಅಡಿಕೆ, ತೆಂಗು, ಬೈನೆ, ಹಲಸು ಮರಗಳನ್ನು ಹುಡುಕಿಕೊಂಡು ಗ್ರಾಮಗಳತ್ತ ಬರುತ್ತಿರಬಹುದು’ ಎಂದು ಪರಿಸರಾಸಕ್ತ ಉಮೇಶ ಗೊದ್ದು ಹೇಳುತ್ತಾರೆ.

ಕಾಡಾನೆ ದಾಳಿಗೆ ಹೆದರಿ ಕಾಫಿ ತೋಟಗಳಲ್ಲಿ ಹಲಸಿನ ಬಡುಕುಗಳನ್ನೇ ನಾಶ ಮಾಡಲಾಗುತ್ತಿದೆ. ಅರಣ್ಯ ಇಲಾಖೆ, ಸಂಘ–ಸಂಸ್ಥೆಗಳು ಸಾಮೂಹಿಕವಾಗಿ ವನ್ಯ ಪ್ರಾಣಿಗಳಿಗೆ ಅವಶ್ಯಕವಾದ ಹಣ್ಣು, ಹಂಪಲಿನ ಬೀಜಗಳನ್ನು ಅರಣ್ಯದಲ್ಲಿ ಬಿತ್ತುವ ಕೆಲಸ ಮಾಡಬೇಕು. ಸರ್ಕಾರ ಪ್ರತ್ಯೇಕ ಯೋಜನೆ ಜಾರಿಗೊಳಿಸಬೇಕು. ಇದರಿಂದ ಭವಿಷ್ಯದಲ್ಲಾದರೂ ವನ್ಯಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ ಸಿಗುವಂತಾದರೆ ಅವುಗಳ ದಾಳಿಯನ್ನು ನೈಸರ್ಗಿಕವಾಗಿ ತಡೆಯಬಹುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.