ADVERTISEMENT

ಸಕಲೇಶಪುರ| ಮಹಿಳಾ ಸ್ವಾವಲಂಬನೆಗೆ ವಿಫುಲ ಅವಕಾಶ: ಶಾಸಕ ಸಿಮೆಂಟ್‌ ಮಂಜು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:33 IST
Last Updated 20 ಫೆಬ್ರುವರಿ 2026, 6:33 IST
ಸಕಲೇಶಪುರದಲ್ಲಿ ಬುಧವಾರ ಆರಂಭವಾದ ಕೌಶಲಾಭಿವೃದ್ಧಿ ತರಬೇತಿ ಶಿಬಿರವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು 
ಸಕಲೇಶಪುರದಲ್ಲಿ ಬುಧವಾರ ಆರಂಭವಾದ ಕೌಶಲಾಭಿವೃದ್ಧಿ ತರಬೇತಿ ಶಿಬಿರವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು    

ಸಕಲೇಶಪುರ: ಮಹಿಳೆಯರು ಸರ್ಕಾರ ಹಾಗೂ ಸ್ವಸಹಾಯ ಸಂಘಗಳಿಂದ ಆರ್ಥಿಕ ನೆರವು ಪಡೆದು, ಗುಡಿ ಕೈಗಾರಿಕೆ, ಸಣ್ಣ ಉದ್ಯಮಗಳನ್ನು ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಶಾಸಕ ಸಿಮೆಂಟ್ ಮಂಜು  ಹೇಳಿದರು.

ಪಟ್ಟಣದ ಪುರಭವನದಲ್ಲಿ ಆಲೂರಿನ ಹರ್ಷಿತ ಸಂಸ್ಥೆ ಕೈಗಾರಿಕಾ ಮತ್ತು ಕೌಶಲ ತರಬೇತಿ ಸಂಸ್ಥೆ ಹಾಗೂ ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ಆಶ್ರಯದಲ್ಲಿ ನಿರುಪಯುಕ್ತ ವಸ್ತುಗಳಿಂದ ಗೃಹ ಆಲಂಕಾರಿಕ ವಸ್ತುಗಳ ತಯಾರಿಕೆ ಕುರಿತು  20 ದಿನಗಳ ಕೌಶಲಾಭಿವೃದ್ಧಿ ತರಬೇತಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

 ಭಾರತ ಕೆಲವೇ ವರ್ಷಗಳಲ್ಲಿ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಲಿದೆ.  ಯುವಕರು ಮತ್ತು ಮಹಿಳೆಯರು ಸ್ವಂತ ಉದ್ಯೋಗಗಳತ್ತ ಮುಖ ಮಾಡಬೇಕು. ಹತ್ತು ಮಂದಿಗೆ ಕೆಲಸ ನೀಡುವ ಮಟ್ಟಕ್ಕೆ ಮಹಿಳೆಯರು ಬೆಳೆಯಬೇಕು. ಕೇಂದ್ರ ಸರ್ಕಾರ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ 33 ಮೀಸಲಾತಿ ನೀಡುವ ಮೂಲಕ ಹೆಚ್ಚಿನ ಅವಕಾಶ ಕಲ್ಪಿಸಿದೆ ಎಂದರು.

ADVERTISEMENT

ನಿರುಪಯುಕ್ತ ವಸ್ತುಗಳಿಂದ ಆಲಂಕಾರಿಕ ವಸ್ತುಗಳನ್ನು ತಯಾರಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದ್ದು,  ತರಬೇತಿಯ ಸದುಪಯೋಗ ಪಡೆಯಿರಿ  ಎಂದು ಸಲಹೆ ನೀಡಿದರು.

ನಬಾರ್ಡ್‌ನ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಪರವಾಗಿ ರೇಣುಕಾ ಶಿವಕುಮಾರ್ ಮಾತನಾಡಿ, 1999ರಿಂದ ಹರ್ಷಿತ ಸಂಸ್ಥೆ ಗ್ರಾಮೀಣ ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಕೌಶಲ ತರಬೇತಿ ನೀಡುತ್ತಿದ್ದು,   ತಳಮಟ್ಟದ ಮಹಿಳೆಯರನ್ನು ಶಕ್ತಿವಂತರನ್ನಾಗಿ ಮಾಡುತ್ತಿದೆ ಎಂದು ಹೇಳಿದರು.

ಹರ್ಷಿತ ಸಂಸ್ಥೆ ಅದ್ಯಕ್ಷ ನಂಜಪ್ಪ ಶೆಟ್ಟಿ, ಲತಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಸರಸ್ವತಿ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಗಂಗಾಧರ್, ಸಂಸ್ಥೆಯ ಪೂರ್ಣಿಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.