ಸಕಲೇಶಪುರ: ಬಯಲು ಸೀಮೆಗೆ ಹರಿಯಬೇಕಿದ್ದ ಎತ್ತಿನಹೊಳೆ ಯೋಜನೆಯ ನೀರು ಸದ್ಯ ಹೇಮಾವತಿ ನದಿಗೆ ಹರಿಯುತ್ತಿದೆ. ಇನ್ನೊಂದೆಡೆ ಪ್ರಾಯೋಗಿಕ ಪರೀಕ್ಷೆಗಾಗಿ ಬಳಸುತ್ತಿರುವ ವಿದ್ಯುತ್ ಶುಲ್ಕವೂ ಹೆಚ್ಚಾಗುತ್ತಿದೆ.
‘ನೀರು ಹರಿಸಲಿ, ಬಿಡಲಿ, ವಿಶ್ವೇಶ್ವರಯ್ಯ ಜಲ ನಿಗಮದಿಂದ ಸೆಸ್ಕ್ಗೆ ಮಾಸಿಕ ಕನಿಷ್ಠ ಶುಲ್ಕ ₹10 ಕೋಟಿ ಪಾವತಿಸಬೇಕು. ಕನಿಷ್ಠ ಶುಲ್ಕ, ಬಳಸಿದ ವಿದ್ಯುತ್ ಬಿಲ್ ಸೇರಿ 2025ರ ಜೂನ್ 30ರವರೆಗೆ ₹ 123.97 ಕೋಟಿಯನ್ನು ಪಾವತಿಸುವುದು ಸದ್ಯ ಬಾಕಿ ಇದೆ.
ನೇತ್ರಾವತಿ ನದಿ ಮೂಲಕ ಅರಬ್ಬಿ ಸಮುದ್ರ ಸೇರುವ ಎತ್ತಿನಹೊಳೆ ಹಾಗೂ ಉಪ ಹಳ್ಳಗಳ ನೀರನ್ನು ಯೋಜನೆಯಡಿ ಹೇಮಾವತಿ ನದಿಗೆ ಹರಿಸಲಾಗುತ್ತಿದೆ. ಅಲ್ಲಿಂದ ಕಾವೇರಿಗೆ,ನಂತರ ಬಂಗಾಳಕೊಲ್ಲಿ ಸೇರುತ್ತಿದೆ. ‘ಅರಬ್ಬಿ ಸಮುದ್ರಕ್ಕೆ ಹೋಗುವ ನೀರನ್ನು ಬಂಗಾಳಕೊಲ್ಲಿಗೆ ಹರಿಸುವುದಕ್ಕೆ ಇಷ್ಟೊಂದು ಖರ್ಚು ಮಾಡಬೇಕಿತ್ತೇ’ ಎಂಬ ಪ್ರಶ್ನೆ ಸ್ಥಳೀಯರದು.
ಪಶ್ಚಿಮಘಟ್ಟದಲ್ಲಿ ಮಳೆಯಾಗುತ್ತಿದೆ. ಬ್ಯಾರೇಜ್ಗಳು ಭರ್ತಿಯಾಗುತ್ತಿವೆ. ಬೇಲೂರು ತಾಲ್ಲೂಕಿನಲ್ಲಿ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಲುವೆಗೆ ನೀರು ಹರಿಸಲು ಆಗುತ್ತಿಲ್ಲ. ಹೀಗಾಗಿ ಕಾಡುಮನೆ ಹಳ್ಳ, ಹೊಂಗಡಹಳ್ಳ, ಕೇರಿಹೊಳೆಗಳಿಗೆ ನಿರ್ಮಿಸಿರುವ ಬ್ಯಾರೇಜ್ಗಳಿಂದ ನಿತ್ಯ 1,500 ಕ್ಯುಸೆಕ್ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ.
ನದಿಗೆ ನೀರು ಹರಿಸುವ ಉದ್ದೇಶದ ಕಾಲುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸದೇ ಇರುವ ಕಾರಣ ನದಿ ಪಾತ್ರದ ರಸ್ತೆ, ಮಣ್ಣು ಕೊಚ್ಚಿ ಹೋಗಿದೆ. ಹತ್ತಾರು ರೈತರ ಜಮೀನಿಗೆ ಹೋಗಲು ಇದ್ದ ಏಕೈಕ ರಸ್ತೆಯೂ ನಾಶವಾಗಿ ಸಮಸ್ಯೆ ಸೃಷ್ಟಿಯಾಗಿದೆ.
ಜೂನ್ 25 ರಿಂದ ಪ್ರಾಯೋಗಿಕ ಪರೀಕ್ಷೆಯು ಆರಂಭವಾಗಿದ್ದು, ಅಕ್ಟೋಬರ್ ಅಂತ್ಯದವರೆಗೂ ನೀರು ಹರಿಸುವುದಾಗಿ ವಿಶ್ವೇಶ್ವರಯ್ಯ ಜಲ ನಿಗಮದ ಮೂಲಗಳು ತಿಳಿಸಿವೆ.
ಪ್ರಾಯೋಗಿಕ ಪರೀಕ್ಷೆ: ಜೂನ್ 30ರವರೆಗೆ 170 ಮೆಗಾ ವಾಟ್ ವಿದ್ಯುತ್ ಬಳಕೆ ಜುಲೈನಲ್ಲಿ ನಿರಂತರ ನದಿಗೆ ನೀರು: ವಿದ್ಯುತ್ ಬಳಕೆಯ ಪ್ರಮಾಣ ದುಪ್ಪಟ್ಟು
ಬ್ಯಾರೇಜ್ಗಳೆಲ್ಲ ಭರ್ತಿಯಾಗಿದ್ದರಿಂದ ಏಕಕಾಲಕ್ಕೆ ಪಂಪ್ಹೌಸ್ಗಳಿಂದ ನೀರು ಹರಿಸಲಾಗುತ್ತಿದೆ. ನಿರಂತರವಾಗಿ ಹೇಮಾವತಿಗೆ ನೀರು ಹರಿಸುವುದಿಲ್ಲವೆಂಕಟೇಶ್ ಕಾರ್ಯಪಾಲಕ ಎಂಜಿನಿಯರ್ ವಿಶ್ವೇಶ್ವರಯ್ಯ ಜಲ ನಿಗಮ
ಸಮುದ್ರಕ್ಕೆ ಹೋಗುವ ನೀರನ್ನು ಮತ್ತೊಂದು ಕಡೆ ಸಮುದ್ರಕ್ಕೆ ಹರಿಸಿದರೆ ಏನು ಪ್ರಯೋಜನ? ಜನರ ತೆರಿಗೆ ಹಣದಲ್ಲಿ ವಿದ್ಯುತ್ನ ವ್ಯರ್ಥ ಬಳಕೆ ನಿಜಕ್ಕೂ ತುಘಲಕ್ ಆಳ್ವಿಕೆ ನೆನಪಿಸುತ್ತಿದೆಸಿಮೆಂಟ್ ಮಂಜು ಶಾಸಕ ಸಕಲೇಶಪುರ
ಯೋಜನೆಗೆ ಪಡೆದಿರುವ ವಿದ್ಯುತ್ ಸಂಪರ್ಕ
ಬ್ಯಾರೇಜ್; ವಿದ್ಯುತ್
ವೈರ್ 04;3,178 ಕಿ.ವ್ಯಾ
ವೈರ್ 05;9,192 ಕಿ.ವ್ಯಾ
ವೈರ್ 06;3,425 ಕಿ.ವ್ಯಾ
ವೈರ್ 07;8,757 ಕಿ.ವ್ಯಾ.
ವೈರ್ 08;338 ಕಿ.ವ್ಯಾ
ಡಿಸಿ 1;1,24,026 ಕಿ.ವ್ಯಾ.
ಡಿಸಿ 3;64,591 ಕಿ.ವ್ಯಾ.
ಒಟ್ಟು;246.983 ಮೆ.ವಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.