ಸವಣೂರ: ‘70 ವರ್ಷಗಳ ಹಿಂದೆ ಮಹಾತ್ಮರು ಸಂಕಲ್ಪ ಮಾಡಿದಂತೆ ಈಗ ದೇಶ ಕಾಂಗ್ರೆಸ್ ಮುಕ್ತವಾಗುವ ಸಮಯ ಕೂಡಿ ಬಂದಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ನಡೆದ ‘ಶಿಗ್ಗಾವಿ–ಸವಣೂರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಸವಣೂರ, ಹುರಳಿಕುಪ್ಪಿ, ಕಾರಡಗಿ ಶಕ್ತಿ ಕೇಂದ್ರ ಸಮಾವೇಶ’ದಲ್ಲಿ ಅವರು ಮಾತನಾಡಿದರು.ಆಂತರಿಕ ಸಮೀಕ್ಷೆಯ ಪ್ರಕಾರ ರಾಜ್ಯದ 156 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ. ಅದರಲ್ಲಿ ಶಿಗ್ಗಾವಿ–ಸವಣೂರ ಕ್ಷೇತ್ರ 6ನೇ ಸ್ಥಾನದಲ್ಲಿ ಇರಲಿದೆ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ,‘ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವದು ಅಷ್ಟೇ ಸತ್ಯ. ಕರ್ನಾಟಕವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ದುಸ್ಥಿತಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ಗೆ ರಾಜ್ಯದ ಮತದಾರರು ಸೂಕ್ತ ಪಾಠ ಕಲಿಸಲಿದ್ದಾರೆ’ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪತ್ನಿ ಶಿಲ್ಪಾ ಶೆಟ್ಟರ ಮಾತನಾಡಿ, ‘ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಿದ ಪಕ್ಷ ಬಿಜೆಪಿ. ಆದ್ದರಿಂದ, ಮಹಿಳೆಯರ ಸಂಕಷ್ಟಗಳ ಈಡೇರಿಕೆಗಾಗಿ ಬಿಜೆಪಿಗೆ ಮತ ನೀಡಬೇಕು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನ, ಉಪಾಧ್ಯಕ್ಷ ಮಹೇಶ ಸಾಲಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಗಾಳೆಪ್ಪ ದೊಡ್ಡಪೂಜಾರ, ಉಪಾಧ್ಯಕ್ಷ ಗಿರೀಶ ಮಟಿಗಾರ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ, ಶಿಗ್ಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಪುರಸಭೆ ಅಧ್ಯಕ್ಷ ಖಲಂದರ್ ಅಕ್ಕೂರ, ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಧರಿಯಪ್ಪಗೌಡ ಪಾಟೀಲ, ಶಿವಪುತ್ರಪ್ಪ ಕಲಕೋಟಿ, ಚನ್ನಬಸಯ್ಯ ದುರ್ಗದಮಠ, ಗಂಗಾಧರ ಬಾಣದ, ಮೋಹನ ಮೆಣಸಿನಕಾಯಿ, ಬಸನಗೌಡ ಕೊಪ್ಪದ, ರುದ್ರಗೌಡ ಪಾಟೀಲ, ಸಾತನಗೌಡ, ಕುಮಾರ ಯಲವಿಗಿ, ಕಾಂತೇಶ ವಾಲ್ಮೀಕಿ ಇದ್ದರು.
**
ಹಿಂದುಳಿದ ಜನಾಂಗಕ್ಕೆ ವಿವಿಧ ಯೋಜನೆಗಳ ಮೂಲಕ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳುವ ಕಾಂಗ್ರೆಸ್ ಸರ್ಕಾರ, ದಲಿತರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿದೆ – ಬಸವರಾಜ ಬೊಮ್ಮಾಯಿ, ಶಾಸಕ
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.