ಹಾವೇರಿ: ಸಿಇಟಿ ಬಿಕ್ಕಟ್ಟು ಶಾಶ್ವತವಾಗಿ ಪರಿಹರಿಸಲು ಸರ್ಕಾರ ಮುಂದಾಗ-ಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಶಾಖೆಯ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜೆ.ಎಚ್. ಪಟೇಲ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿತು.
ಇಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ನಂತರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ವೃತ್ತಿ ಶಿಕ್ಷಣ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಶೇಕಡಾ ೫೦:೫೦ ಸೀಟು ಹಂಚಿಕೆ ಅನುಪಾತವನ್ನು ಜಾರಿಗೊಳಿಸಬೇಕು.
ಶೇ.೫೦ ಸೀಟುಗಳಿಗೆ ಸರ್ಕಾರ ವಿದ್ಯಾರ್ಥಿಗಳು ಭರಿಸಬಹುದಾದ ಕಡಿಮೆ ಶುಲ್ಕವನ್ನು ನಿರ್ಧರಿಸಬೇಕು. ಶೇ.೫೦ ಸೀಟು ಆಡಳಿತ ಮಂಡಳಿ ಸೀಟುಗಳಿಗೆ ಹೆಚ್ಚುವರಿ ಶುಲ್ಕವನ್ನು ನಿರ್ಧಾರ ಮಾಡಬೇಕು. ಸರ್ಕಾರದ ಪ್ರತಿಶತ ೧೦೦ ಸೀಟುಗಳನ್ನು ಸರ್ಕಾರ ಕೇಂದ್ರಿಯ ಪ್ರವೇಶ ನೀತಿಯ ಮೂಲಕ ಹಾಗೂ ಏಕಗವಾಕ್ಷಿಯ ಮೂಲಕ ಪ್ರವೇಶಾತಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಸಂಚಾಲಕ ನಾಗರಾಜ್ ಹುಳ್ಳಿಕುಪ್ಪಿ, ಕಿರಣ ಕೊಣ್ಣನವರ, ಪವನ ತಳವಾರ, ಸಂಜು ಕೋರವಾರ, ಹರೀಶ ಕೊರವರ, ನಾಗರಾಜ ಹಾವೇರಿ, ಯಶವಂತ್ ಹಾಗೂ ಸರ್ಕಾರಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡ್ಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.