ADVERTISEMENT

ಕನಕ ಅರಮನೆ ಅನಾವರಣ ಜ. 6ರಂದು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:19 IST
Last Updated 20 ಡಿಸೆಂಬರ್ 2012, 8:19 IST

ಶಿಗ್ಗಾವಿ: ಡಿ. 1ರಂದು ನಡೆಯಬೇಕಿದ್ದ `ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಹಾಗೂ ಅರಮನೆ ಉದ್ಘಾಟನಾ ಸಮಾರಂಭ ಮಾಜಿ ಪ್ರದಾನಿ ಐ.ಕೆ.ಗುಜ್ರಾಲ್ ಅವರ ನಿಧನದಿಂದ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಪುನಃ ಜ. 6ರಂದು ಅರಮನೆ ಉದ್ಘಾಟನಾ ಕಾರ್ಯ ನಡೆಯಲಿದ್ದು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅರಮನೆ ಉದ್ಘಾಟಿಸಲಿದ್ದಾರೆ' ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಲ್ಲೂಕಿನ ಬಾಡ ಗ್ರಾಮದಲ್ಲಿ ಮಂಗಳವಾರ ಕನಕದಾಸರ ಅರಮನೆ, ದರ್ಬಾರ್ ಹಾಲ್ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬದುಕಿನ ಮೌಲ್ಯಗಳನ್ನು ಸಾರಿ, ಕನ್ನಡ ಭಾಷೆ, ಸಾಹಿತ್ಯದ ಶ್ರಿಮಂತಿಕೆ ಹೆಚ್ಚಿಸಿದ ಭಕ್ತ ಕನಕದಾಸರ ಜನ್ಮಸ್ಥಳ ಇನ್ನು ಮುಂದೆ ಪ್ರಪಂಚಕ್ಕೆ ಪರಿಚಯಸುವ ಜೊತೆಗೆ ವಿಶ್ವದಲ್ಲೇ  ಪ್ರವಾಸಿ ತಾಣವಾಗಲ್ಲಿದೆ. ಗತ ವೈಭವ ಸಾರುವ ಕನಕರ ಅರಮನೆ, ಕೋಟೆ ಹೆಬ್ಬಾಗಿಲು ಸೇರಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.

ಕನಕನ ಜನ್ಮಸ್ಥಳದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವರು. ಅಂದು ಸರ್ಕಾರ ಹಿರಿಯ ಸಚಿವರು ಸೇರಿದಂತೆ ವಿರೋಧ ಪಕ್ಷದ ನಾಯಕರು ಆಗಮಿಸುವರು. ಈ ಕುರಿತು ಬೆಂಗಳೂರಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಈಗ ಬಾಕಿ ಇರುವ ಕಾಮಗಾರಿಗಳನ್ನು ಜ. 6ರ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೈಲ ವರ್ಣ ಮತ್ತು ಗ್ರಾನೈಟ್ ಕೆತ್ತನೆ ಕಲ್ಲಿನಲ್ಲಿ ಕನಕದಾಸರ ವಿಚಾರಧಾರೆ, ತತ್ವ ಪದಗಳನ್ನು ಪ್ರತಿಯೊಬ್ಬರಿಗೂ ಪ್ರಸ್ತುತಪಡಿಸುವ ವ್ಯವಸ್ಥೆ ಕೈಗೊಂಡಿದ್ದಾಗಿ ತಿಳಿಸಿದರು.

ಕನಕರ ದರ್ಬಾರ ಹಾಲ್‌ನಲ್ಲಿ ಸರ್ವಧರ್ಮದ ಸರ್ವ ಭಾಷೆಗಳಲ್ಲಿ ತತ್ವಪದ ಮತ್ತು ತತ್ವಜ್ಞಾನ ಪ್ರಸಾರ ಮಾಡುವಂತ ವಿಚಾರಗೋಷ್ಠಿಗಳನ್ನು ನಡೆಸಲು ಸಂಶೋಧಕ, ಪ್ರಾಧ್ಯಾಪಕರೊಂದಿಗೆ ಚರ್ಚೆ ನಡೆಸಲು ಚಿಂತನೆ ನಡೆದಿದೆ. ಕನಕದಾಸರ ವಿಚಾರಗೋಷ್ಠಿ ನಡೆಸಲು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಕನಕ ಅಧ್ಯಯನ ಕೇಂದ್ರ ಸ್ಥಾಪಿಸುವ ಮೂಲಕ ರಾಷ್ಟ್ರೀಯ ಗ್ರಂಥಾಲಯವೊಂದನ್ನು ಸ್ಥಾಪಿಸಲಾಗುತ್ತಿದೆ. ಈ ಗ್ರಂಥಾಲಯದಲ್ಲಿ ಸರ್ವಧರ್ಮದ ಸರ್ವ ಭಾಷೆಗಳ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಜೊತೆಗೆ ಭವ್ಯ ಯಾತ್ರಿ ನಿವಾಸ ಸ್ಥಾಪನೆ ಕುರಿತು ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆಯ ಲಾಗಿದೆ ಎಂದು ಹೇಳಿದರು.

ದೆಹಲಿಯಲ್ಲಿ ಕನಕದಾಸರ ವಿಚಾರಧಾರೆಗಳ ಕುರಿತು ರಾಷ್ಟ್ರೀಯ ಮಟ್ಟದ ಚರ್ಚಾಕೂಟ ಆಯೋಜಿಸಲಾಗಿತ್ತು. ಅದರಲ್ಲಿ ರಾಷ್ಟ್ರದ ವಿವಿಧ ಮೊಲೆಗಳಿಂದಲೇ ಸಾಹಿತ್ಯಗಳು, ತತ್ವಜ್ಞಾನಿಗಳು ಸೇರಿ ಕೆಲ ರಾಷ್ಟ್ರೀಯ ಮುಖಂಡರು ಪಾಲ್ಗೊಂಡಿದ್ದರು. ಇನ್ಮುಂದೆ ಪ್ರತಿವರ್ಷ ಈ ಚರ್ಚಾಕೂಟ ನಡೆಸುವ ಚಿಂತನೆ ಇದೆ ಎಂದು ಹೇಳಿದರು.

ದೇವಣ್ಣ ಚಾಕಲಬ್ಬಿ, ವಕೀಲ ಎಸ್.ಕೆ. ಅಕ್ಕಿ, ಜಿ.ಪಂ. ಸದಸ್ಯರಾದ ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣನವರ, ಸರೋಜವ್ವ ಆಡಿನ, ತಾ.ಪಂ. ಅಧ್ಯಕ್ಷೆ ಉಷಾ ಬಿಳಿಕುದರಿ, ಸದಸ್ಯರಾದ ಸುಜಾತ ಕಲಕಟ್ಟಿ, ಫರಿದಾಬಾನು ಶೇಖಸನದಿ, ನಿಂಗಪ್ಪ ಹರಿಜನ, ವಿರೂಪಾಕ್ಷಪ್ಪ ಆಡಿನ, ಶೇಖಣ್ಣ ಕುಂದೂರ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.